ADVERTISEMENT

’ಜನರು ಮತಬ್ಯಾಂಕ್‌ ಆಗಿ ಉಳಿದಿಲ್ಲ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 8:58 IST
Last Updated 3 ಅಕ್ಟೋಬರ್ 2017, 8:58 IST

ಶಿಗ್ಗಾವಿ: ‘ಜನರನ್ನು ಮತಬ್ಯಾಂಕ್ ಎಂದು ಪರಿಗಣಿಸುವ ರಾಜಕಾರಣಿಗಳಿಗೆ ಭವಿಷ್ಯವಿಲ್ಲ. ಜನರು ಜಾಗೃತರಾಗಿದ್ದಾರೆ. ಯಾವ ಮತದಾರರು ಇಂದು ಮತಬ್ಯಾಂಕ್‌ವಾಗಿ ಉಳಿದಿಲ್ಲ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ನುಡಿದರು.

ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯ್ತಿ ನೂತನ ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಟೀಕಿಸುವ ಮತ್ತು ಅಪಪ್ರಚಾರಕ್ಕಿಳಿದು ವಿರೋಧಿಸುವ ಜನರು ಯೋಜನೆಯ ಹಿಂದಿನ ಉದ್ದೇಶ ಮತ್ತು ಜನರಿಗಾಗುವ ಲಾಭ–ನಷ್ಟದ ಕುರಿತು ಸ್ಥಳೀಯವಾಗಿ ಪರಿಶೀಲಿಸಿ, ಸತ್ಯಾಂಶವನ್ನು ಅರಿಯಬೇಕು. ಟೀಕೆ–ಟಿಪ್ಪಣೆಗಳಿಗಿಂತ ಕ್ಷೇತ್ರದ ಅಭಿವೃದ್ಧಿ ನಮ್ಮದಾಗಬೇಕು’ ಎಂದರು.

ADVERTISEMENT

‘ಸರ್ಕಾರಗಳು ಹಳ್ಳಿ ಜನರ ಸಮಸ್ಯೆ ಆಲಿಸುವಂತಾಗಬೇಕು. ಹಳ್ಳಿಗಳತ್ತ ಚಿತ್ತ ಹರಿಸುವ, ಚಿಂತನೆ ಮಾಡುವ ಮನೋಭಾವ ಸರ್ಕಾರಗಳಲ್ಲಿ ಮೂಡಬೇಕು. ಅದಕ್ಕಾಗಿ ಅಧಿಕಾರ ವಿಕೇಂದ್ರಿಕರಣವಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ‘ಪಕ್ಷಾತೀತ, ಜಾತ್ಯತೀತವಾಗಿ ಬಡಜನರ ಏಳ್ಗೆಗೆ ಶ್ರಮಿಸುವುದು ಇಂದಿನ ತುರ್ತು’ ಎಂದರು.

ಅರಳೆಲೆಮಠದ ರೇವಣಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿವದೇವ ಶರಣರು, ಮಲ್ಲಿಕಾರ್ಜುನ ಶ್ರೀಗಳ ಸಮ್ಮುಖ ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.

ಎಪಿಎಂಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಮತ್ತಿತರರು ಇದ್ದರು. ಶಶಿಧರ ಹೊನ್ನಣ್ಣನವರ ಸ್ವಾಗತಿಸಿದರು. ಮಹೇಶ ಬಸರೀಕಟ್ಟಿ ನಿರೂಪಿಸಿದರು.

***

ಸರ್ಕಾರದ ಯೋಜನೆಗಳನ್ನು ಬಡಕೂಲಿಕಾರರಿಗೆ ಸರಿಯಾಗಿ ವಿನಿಯೋಗಿಸುವ ಜೊತೆಗೆ ಮಾದರಿ ಗ್ರಾಮ ಪಂಚಾಯ್ತಿಯಾಗಿ ಹೊರಹೊಮ್ಮಬೇಕು
ಬಸವರಾಜ ಬೊಮ್ಮಾಯಿ, ಶಾಸಕ, ಶಿಗ್ಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.