ADVERTISEMENT

ಪ್ರಾಣ ಬಿಟ್ಟರೂ ಭೂಮಿ ಬಿಡೆವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 5:35 IST
Last Updated 2 ಮಾರ್ಚ್ 2012, 5:35 IST
ಪ್ರಾಣ ಬಿಟ್ಟರೂ ಭೂಮಿ ಬಿಡೆವು
ಪ್ರಾಣ ಬಿಟ್ಟರೂ ಭೂಮಿ ಬಿಡೆವು   

ಹಾವೇರಿ: `ಭೂಮಿಯನ್ನು ಮಾರಿದರೆ, ಜನ್ಮಕೊಟ್ಟ ತಾಯಿಯನ್ನೇ ಮಾರಿದಂತೆ, ಯಾರಾದರೂ ತಾಯಿಯನ್ನು ಮಾರಾಟ ಮಾಡುತ್ತಾರೆಯೇ, ಒಂದು ವೇಳೆ ಮಾರಾಟ ಮಾಡಿದರೆ, ಈ ಸಮಾಜದಲ್ಲಿ ಆತನಿಗೆ ತಾಯಿಗಂ... ಎಂದು ಕರೆಯುತ್ತಾರೆ. ಬದುಕು ಕಟ್ಟಿಕೊಟ್ಟ ಭೂಮಿತಾಯಿಯನ್ನು ಮಾರಾಟ ಮಾಡಿ ಜನರಿಂದ ಆ ಮಾತನ್ನು ಅನ್ನಿಸಿಕೊಳ್ಳಬೇಕೇ? ಅದು ಎಂದಿಗೂ ಸಾಧ್ಯವಿಲ್ಲ. ಪ್ರಾಣವನ್ನಾದರೂ ಬಿಡುತ್ತೇವೆ ಹೊರತು, ಜಮೀನನ್ನು ನೀಡುವುದಿಲ್ಲ...!~

ಇಂತಹ ಭಾವನಾತ್ಮಕ ಹಾಗೂ ಆಕ್ರೋಶಭರಿತ ಮಾತುಗಳನ್ನು ಹೇಳಿದವರು ಬೇರಾರೂ ಅಲ್ಲ. ಟಾಟಾ ಮೆಟಾಲಿಕ್ ಉಕ್ಕು ಕಾರ್ಖಾನೆಗೆ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುವ ಅಗಡಿ ಹಾಗೂ ಬೂದಗಟ್ಟಿ ಗ್ರಾಮಗಳ ರೈತರು.

ಸುಡು ಬಿಸಿಲು ನೆತ್ತಿಯನ್ನು ಚುರಗುಡುತ್ತಿದ್ದರೂ ಅದನ್ನು ಲೆಕ್ಕಿಸದೇ ಭೂಮಿ ವಶಪಡಿಸಿಕೊಳ್ಳುವ ಸರ್ಕಾರದ ವಿರುದ್ಧ ಹೊಟ್ಟೆಯಲ್ಲಿರುವ ಆಕ್ರೋಶವನ್ನು ಮಾತಿನ ಮೂಲಕ ಹೊರಹಾಕಿದರು.

ಫ್ಯಾಕ್ಟರಿಗೆ ಹೊಲ ಕೊಡುವುದಿಲ್ಲ ಎಂದರೂ, ಅವರು ಅಲ್ಲಿಯೇ ಫ್ಯಾಕ್ಟರಿ ಕಟ್ಟಲು ಸರ್ಕಾರ ಮುಂದಾದರೆ, ನಮ್ಮ ಹೆಣದ ಮೇಲೆ ಕಟ್ಟಲಿ. ಆದರೆ, ನಾವು ಜೀವಂತವಾಗಿರುವವರೆಗೆ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಹೇಳಿದರು.

ಅಗಡಿ ಹಾಗೂ ಬೂದಗಟ್ಟಿ ಗ್ರಾಮದ ರೈತರ ಜಮೀನುಗಳು ನೀರಾವರಿ ಸೌಲಭ್ಯ ಹೊಂದಿದ್ದು, ಇದರಲ್ಲಿ ರೈತರು ಉತ್ತಮ ಆದಾಯ ಪಡೆಯುತ್ತಿದ್ದೆೀವೆ. ಅಲ್ಲದೇ ತಮಗೆ ಕೃಷಿ ಬಿಟ್ಟರೆ ಬೇರೆ ಉದ್ಯೋಗ ತಿಳಿದಿಲ್ಲ. ಈ ಕಾರಣದಿಂದ  ಕಾರ್ಖಾನೆ ಸ್ಥಾಪನೆಗಾಗಿ ಭೂಮಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
 
ಸುಮಾರು 40 ಸಾವಿರ ಕೃಷಿ ಭೂಮಿ ಅವಲಂಬಿತ ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಒಂದು ವೇಳೆ ಸರ್ಕಾರ ಕಾರ್ಖಾನೆ ಸ್ಥಾಪನೆಗೆ ಭೂಸ್ವಾಧೀನ ಪಡಿಸಿಕೊಂಡರೆ, ಈ ಕುಟುಂಬಗಳು ಬೀದಿ ಪಾಲಾಗಲಿವೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ರೈತರ ಹೋರಾಟವನ್ನು ಸಡಿಲಗೊಳಿಸಲು ಮುಖಂಡರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಲಾಗುತ್ತಿದೆ. ನಾವು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ.

ನಮ್ಮ ಮೇಲೆ ಅಪನಂಬಿಕೆ ಹುಟ್ಟಿಸುವವರ ಮಾತನ್ನು ಕೇಳದೇ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದ ಅವರು, ಜನರು ಹೇಳುವಂತೆ ತಾವು ಬೇರೆ ಕಡೆಯಾವುದೇ ಭೂಮಿಯನ್ನು  ಖರೀದಿಸಿಲ್ಲ. ಇದೆಲ್ಲ ವಿರೋಧಿಗಳ ಕುಂತಂತ್ರದ ಮಾತಷ್ಟೇ ಎಂದು ಸ್ಪಷ್ಟಪಡಿಸಿದರು.

ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ನಾರಾಯಣ ಕಾಳೆ ಮಾತನಾಡಿ, ಅನ್ನ ನೀಡುವ ಭೂಮಿಯನ್ನು ಬಂಡವಾಳ ಶಾಹಿಗಳಿಗೆ ಪರಬಾರೆ ಮಾಡಲು ಸಾಧ್ಯ ವಿಲ್ಲ. ಟಾಟಾ ಮೆಟಾಲಿಕ್ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಮುಂದಾದರೆ ತಮ್ಮ ಸಂಘಟನೆ ರೈತರ ಜತೆಗೂಡಿ ಉಗ್ರ ಹೋರಾಟಕ್ಕೆ ಮುಂದಾಗಲಿದೆ  ಎಂದರು.

ಹೊಸಮನಿ ಸಿದ್ದಪ್ಪ ವೃತ್ತದ ರಸ್ತೆಯಲ್ಲಿ ಚಕ್ಕಡಿಗಳ ಮೂಲಕ ರಸ್ತೆ ತಡೆ ನಡೆಸಿದ್ದರಿಂದ ಹೆದ್ದಾರಿಯ ರಸ್ತೆ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಯಿತು.

ತಹಸೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಸಹದೇವಪ್ಪ ಶಿವಣ್ಣವರ, ನೀಲಪ್ಪ ಇಚ್ಚಂಗಿ, ಯಲ್ಲಪ್ಪ ಅಗಸಿಬಾಗಿಲು, ಕರಿಯಪ್ಪ ಕಂಬಳಿ, ಶಿವಪುತ್ರಪ್ಪ ಮಡಿವಾಳರ, ಪುಟ್ಟಪ್ಪ ಕರಿಯಮ್ಮನವರ, ಗುಡ್ಡಪ್ಪ ಡಮ್ಮನಾಳ ಸೇರಿದಂತೆ ನೂರಾರು ರೈತರು ಚಕ್ಕಡಿಗಳೊಂದಿಗೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.