ADVERTISEMENT

ಮೈಕ್ ಕಿತ್ತೆಸೆದು ಸದಸ್ಯರ ಗಲಾಟೆಯಲ್ಲಿ ಸಭೆ ಅಂತ್ಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 7:15 IST
Last Updated 5 ಡಿಸೆಂಬರ್ 2012, 7:15 IST

ರಾಣೆಬೆನ್ನೂರು: ಆಡಳಿತ ಪಕ್ಷದ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ಕೆಜೆಪಿ ಕಾರ್ಯಾಲಯದ ಖಾತೆ ಬದಲಾವಣೆ ಮತ್ತು ಉದ್ಯಾನವನ ಶುಲ್ಕಕ್ಕೆ ಸಂಬಂಧಿಸಿದಂತೆ ತೀವ್ರ ಮಾತಿನ ಚಕುಮಿಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಗದ್ದಲದ ನಡುವೆ ಸಾಮಾನ್ಯ ಸಭೆಯಲ್ಲಿ 16 ವಿಷಯಗಳಿಗೆ ಸಭೆ ಅನುಮೋದನೆ ನೀಡಿತು.

ಸಭೆಯಲ್ಲಿ ಹಲವು ಸದಸ್ಯರು ಠರಾವು ಹಾಗೂ ಮೈಕ್‌ನ್ನು ಕಸಿದು ಕೊಂಡು ಒಂದೇ ಬಾರಿ ಮಾತನಾಡುವುದರ ಮೂಲಕ ಅಧ್ಯಕ್ಷರ ಸರ್ವಾಧಿಕಾತ್ವದ ಬಗ್ಗೆ ಧಿಕ್ಕಾರ ಕೂಗಿ ಧರಣಿ ಕುಳಿತು ಸಭಾತ್ಯಾಗ ಮಾಡಿದರು.

ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಕಾರ್ಯಾಲಯವನ್ನು ಕೆಜೆಪಿ ಕಚೇರಿಯನ್ನಾಗಿ ಖಾತೆ ಬದಲಾಯಿಸಿದ್ದು ಏಕೆ,  ಯಾವಾಗ ಠರಾವು ಮಾಡಿದ್ದೀರಿ, ವಿಷಯ ಯಾರು ಮಂಡಿಸಿದರು, ಯಾರು ಅನುಮೋದಿಸಿದರು, ಉದ್ಯಾನವನ ಫೀ ದೃಢೀಕರಣ ಈಗೇಕೆ ಮಾಡುತ್ತೀರಿ, ಎಂಬ ಪ್ರಶ್ನೆಗಳಿಗೆ ಅಧ್ಯಕ್ಷರು ಉತ್ತರಿಸಬೇಕೆಂದು ವಿರೋಧ ಪಕ್ಷದ ಶಿವಪ್ಪ ಮಣಿಗಾರ, ಡಿ.ಸಿ. ಕುಲಕರ್ಣಿ, ಆಡಳಿತ ಪಕ್ಷದ ವಿ.ಬಿ. ಅಂಗಡಿ, ಬಸವರಾಜ ಲಕ್ಷ್ಮೇಶ್ವರ, ಮಂಜುನಾಥ ಗೌಡಶಿವಣ್ಣನವರ, ಶಾರದ ಆನ್ವೇರಿ, ಲಲಿತಾ ನರಸಗೊಂಡರ, ಗೋಪಾಲ ಪಾಳೇದ,  ಶರಿನ್‌ತಾಜ್ ಶೇಖ್, ನೂರಜಾನ್ ನಂದ್ಯಾಲ, ಸಾವಿತ್ರಮ್ಮ ಕಂಬಳಿ ಅವರು ಪಟ್ಟು ಹಿಡಿದರು.

ನಗರಸಭಾ ಮಾಜಿ ಅಧ್ಯಕ್ಷ ರಾಮಣ್ಣ ಕೊಲಕಾರ, ಶೇಖಪ್ಪ ಹೊಸಗೌಡ್ರ, ರಮೇಶ ಗುತ್ತಲ, ಭೀಮಣ್ಣ ಯಡಚಿ, ಬಸವರಾಜ ಗೌಳಿ ಮತ್ತಿತರರು ಸಭೆ ನಡೆಸಲು ಅನುಕೂಲ ಮಾಡಿ ಕೊಡುವಂತೆ ವಿನಂತಿಸಿಕೊಂಡರೂ ಸದಸ್ಯರು ಅವರ ಮಾತಿಗೆ ಕಿವಿಗೊಡಲಿಲ್ಲ.

ಸದಸ್ಯರ ಒತ್ತಾಯಕ್ಕೆ ಮಣಿದ ಅಧ್ಯಕ್ಷ ಡಾ. ಗಣೇಶ ದೇವಗಿರಿಮಠ, ತಮ್ಮ ಸಮಸ್ಯೆ ಕುರಿತು ಲಿಖಿತವಾಗಿ ಬರೆದು ಕೊಡಿ ಎಂದಾಗ ತೃಪ್ತರಾಗದ ಸದಸ್ಯರು ಮತ್ತೆ ಗದ್ದಲ ಆರಂಭಿಸಿದರು. ಎಲ್ಲವೂ ಕಾನೂನು ಪ್ರಕಾರವೆ ಆಗಿವೆ. ದೃಢೀಕರಣಕ್ಕೆ ಉಪ ಸೂಚನೆ ಕೊಡಲು ಬರುವುದಿಲ್ಲ, ಹತ್ತಾರು ಸದಸ್ಯರು ಒಮ್ಮೆಲೆ ಕೂಗಾಡುವುದು, ಸಭೆಯ ಗೌರವ ಘನತೆ ಕಾಪಾಡಿ ಎಂದು ಮನವಿ ಮಾಡಿದಾಗ ಅದಕ್ಕೆ ಒಪ್ಪದ ಸದಸ್ಯರು ಅಧ್ಯಕ್ಷರಿಗೆ ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು. ನಗರಸಭಾ ಅಧ್ಯಕ್ಷ ಡಾ.ಗಣೇಶ ದೇವಗಿರಿಮಠ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರೇಮಾ ಅಟವಾಳಗಿ. ಶಾಸಕ ಜಿ. ಶಿವಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.