ಹಾವೇರಿ: ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ಜನತೆಗೆ ಮುಂಗಾರು ಖುಷಿ ಕೊಟ್ಟಿದೆ. ಆದರೆ, ಒಂದು ವಾರ ಸುರಿದ ಮಳೆಗೆ ಗ್ರಾಮೀಣ ಭಾಗವು ತಂಪಾಗಿದ್ದು ಜನ ನೆಮ್ಮದಿ ಪಟ್ಟರೆ, ಹಾವೇರಿ ನಗರದ ಸ್ಥಿತಿ ಮಾತ್ರ ಹದಗೆಟ್ಟಿದೆ.
‘ಅಧಿಕಾರ’ದ ಕಚ್ಚಾಟದಲ್ಲೇ ಮುಳುಗಿದ ನಗರಸಭೆಯು ಮಳೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ನಗರದ ಸ್ಥಿತಿ ಅಧೋಗತಿಯಾಗಿದೆ. ಮಳೆ ನಿಂತ ಬಳಿಕ ಯಾಲಕ್ಕಿ ಕಂಪಿನ ಹಾವೇರಿಯು ‘ದೂಳುಮಯ’ವಾಗಿದೆ.
ನಗರದ ವಿವಿಧೆಡೆ ರಸ್ತೆ ಮತ್ತಿತರ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಇನ್ನೂ ಹಲವೆಡೆ ಪೈಪ್ಲೈನ್ಗಾಗಿ ಅಗೆದು ಹಾಕಿದ ಮಣ್ಣು ರಸ್ತೆ ಬದಿ ಯಲ್ಲೇ ಬಿದ್ದಿದೆ. ತ್ಯಾಜ್ಯ ವಿಲೇವಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರ ಪರಿಣಾಮವಾಗಿ ಈ ಬಾರಿ ಮಳೆಗೆ ಮಣ್ಣು, ತ್ಯಾಜ್ಯವೆಲ್ಲ ರಸ್ತೆಗೆ ಹರಿದು ಬಂದಿದೆ. ಹೀಗಾಗಿ ಮಳೆಗೆ ನಗರವೇ ಕೆಸರುಮಯವಾಗಿತ್ತು. ಆದರೂ, ಸ್ವಚ್ಛಗೊಳಿಸಲು ನಗರಸಭೆ ಕ್ರಮ ಕೈಗೊಂಡಿಲ್ಲ. ಕಳೆದೆರಡು ದಿನಗಳಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದ್ದು, ಬಿಸಿಲಿನಿಂದ ಕೂಡಿದೆ. ಇದರಿಂದ ರಸ್ತೆ ಮೇಲೆ ನಿಂತಿದ್ದ ಕೆಸರು, ಮಣ್ಣು ಸ್ಥಳದಲ್ಲೇ ಒಣಗಿ ಕಣ್ಣು ಬಿಡಲಾಗದಷ್ಟು ದೂಳು ರಾಚುತ್ತಿದೆ.
ಈ ಪೈಕಿ ನಗರದ ಪ್ರಮುಖ ರಸ್ತೆಯಾದ ಪಿ.ಬಿ ರಸ್ತೆಯ ದ್ವಿಭಾಜಕದ ಇಕ್ಕೆಡೆಗಳಲ್ಲಿ ಮಣ್ಣು ನಿಂತಿದ್ದು, ಸಂಚಾರ ದುಸ್ತರವಾಗಿದೆ. ಇನ್ನೊಂದೆಡೆ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾ ಗದ ರಸ್ತೆಯನ್ನು ದುರಸ್ತಿಯೇ ಮಾಡಿಲ್ಲ. ಹೀಗಾಗಿ ಇಲ್ಲಿ ರಸ್ತೆ ಹೊಂಡ ಗುಂಡಿಗಳ ನಡುವೆ ದೂಳಿನ ಅಬ್ಬರ ಹೇಳತೀರದು. ನಗರದ ಬಡಾವಣೆಗಳ ಒಳ ಬೀದಿಗಳಲ್ಲೂ ಇದೇ ಸಮಸ್ಯೆ. ಒಂದೆಡೆ ಜಿಲ್ಲಾಡಳಿತ ಆರೋಗ್ಯ ಮುನ್ನೆಚ್ಚರಿಕೆ ನೀಡುತ್ತಿದ್ದರೆ, ಇತ್ತ ಆಡಳಿತದ ನಿರ್ಲಕ್ಷ್ಯ ದಿಂದಲೇ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುವಂತಿವೆ.
ಸಂಚಾರ ಸಂಕಷ್ಟ
ಮಳೆ ನಿಂತ ಬಳಿಕ ಗಾಳಿ ಬೀಸುತ್ತಿದೆ. ಈ ಗಾಳಿಗೆ ದೂಳಿನ ಅಬ್ಬರ ಹೆಚ್ಚಿದೆ. ಬಸ್, ಲಾರಿ, ಕಾರು ಮತ್ತಿತರ ವಾಹನಗಳು ರಸ್ತೆಯಲ್ಲಿ ಸಂಚರಿಸುವಾಗ ಬೈಕ್, ಸ್ಕೂಟರ್ ಮುಂತಾದ ದ್ವಿಚಕ್ರ ಸವಾರರು, ಸೈಕಲ್ ಸವಾರರು ಹೋಗುವುದೇ ಅಸಾಧ್ಯ ಎನಿಸಿದೆ.
ಅತಿಕ್ರಮಣ
ಇನ್ನು ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಹೊಸಮನಿ ಸಿದ್ದಪ್ಪ ವೃತ್ತಕ್ಕೆ, ಅಲ್ಲಿಂದ ಜಿಲ್ಲಾಸ್ಪತ್ರೆ, ಹುಕ್ಕೇರಿ ಮಠದ ಕಡೆಗೆ ನಡೆದು ಹೋಗುವ ಪಾದಚಾರಿಗಳ ಪಾಡು ಹೇಳತೀರದು. ನಿರೋಗಿಗೂ ’ಅಸ್ತಮಾ’ ಬರುವಂತಿದೆ. ನಗರದ ಎಲ್ಲೆಡೆ ಸಮರ್ಪಕ ಪಾದ ಚಾರಿ ಹಾದಿ ಇಲ್ಲ. ಕೆಲವೆಡೆ ಪಾದಚಾರಿ ಹಾದಿಯನ್ನು ಬೀದಿ ಬದಿ ವ್ಯಾಪಾರ ಹಾಗೂ ವಾಹನ ನಿಲುಗಡೆಯು ಆವರಿ ಸಿದೆ. ಯಾರೂ ಕ್ರಮ ಕೈಗೊಳ್ಳುತ್ತಿಲ್ಲ.
‘ವಾಹನ ಸಂಚಾರಕ್ಕಿಂತ ಹೆಚ್ಚಾಗಿ ನಮ್ಮ ಆರೋಗ್ಯ ಕಾಪಾಡುವುದೇ ಪ್ರಮುಖ ಸವಾಲು. ನಾವು ಮಾಸ್ಕ್ ಧರಿಸಿದರೂ, ಸಂಜೆಯ ವೇಳೆಗೆ ಕೆಮ್ಮು ಆರಂಭಗೊಳ್ಳುತ್ತದೆ. ರಸ್ತೆಯೆಲ್ಲ ದೂಳುಮಯವಾಗಿದೆ. ಸಂಬಂಧಪಟ್ಟವರು ಈ ಕಡೆಗೆ ಕ್ರಮ ಕೈಗೊಳ್ಳುವುದಿಲ್ಲ. ನಮ್ಮಂತಹವರ ಪಾಡೇ ಹೀಗಾದರೆ, ಇನ್ನು ಜನಸಾಮಾನ್ಯರ ಪಾಡು ಹೇಳತೀರದು’ ಎಂದು ಪೊಲೀಸರೊಬ್ಬರು ದೂರುತ್ತಾರೆ.
‘ನಾವು ಶುಭ್ರ ವಸ್ತ್ರ ಧರಿಸಿ ಬಂದಿದ್ದರೂ, ಬಸ್ ನಿಲ್ದಾಣದಿಂದ ಕಾಲೇಜು ಬಳಿ ಬರುವಾಗ ದೂಳಿನ ಸ್ನಾನವಾಗಿರುತ್ತದೆ. ಇನ್ನು ಸಮವಸ್ತ್ರ ಧರಿಸಿ ಬರುವ ಪ್ರಾಥಮಿಕ– ಪ್ರೌಢ ಶಾಲೆಯ ಮಕ್ಕಳ ಪರಿಸ್ಥಿತಿ ಸಂಜೆಯ ವೇಳೆಗೆ ಹೇಳತೀರಲಾಗದು’ ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿ ರವೀಶ. ಒಟ್ಟಾರೆ ‘ಯಾಲಕ್ಕಿ ಕಂಪಿನ ಖ್ಯಾತಿ ನಗರದ ರಸ್ತೆಗಳಲ್ಲಿ ಮೂಗು ಬಿಡುವುದೂ ಅಸಾಧ್ಯ’ ಎನ್ನುವಂತಾಗಿದೆ.
ಮುಖ್ಯಾಂಶಗಳು
* ಎಲ್ಲೆಡೆ ರಾಚುತ್ತಿರುವ ದೂಳು
* ಹೊಂಡ ಗುಂಡಿಯಾದ ರಸ್ತೆಗಳ ನಡುವೆ ದೂಳೂ
* ಒಳ ಬೀದಿಗಳಲ್ಲೂ ಇದೇ ಸಮಸ್ಯೆ
ನಗರಸಭೆಯ ಆಡಳಿತ ಸ್ಥಗಿತಗೊಂಡಿದೆ. ಅಧಿಕಾರಿಗಳು ಇಲ್ಲ. ಉಸ್ತುವಾರಿ ಸಚಿವರು ಕದ್ದುಮುಚ್ಚಿ ಬಂದು ಹೋಗುತ್ತಾರೆ, ಸರ್ಕಾರಕ್ಕೆ ಹಾವೇರಿ ಮರೆತು ಹೋಗಿದೆ.
ಕರಬಸಪ್ಪ ಹಳದೂರು, ಸದಸ್ಯರು, ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.