ADVERTISEMENT

ಸಮೃದ್ಧ ಪಪ್ಪಾಯಿ ಬೆಳೆದ ರೈತರಿಗೆ ಸಂಕಷ್ಟ !

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 7:00 IST
Last Updated 29 ಅಕ್ಟೋಬರ್ 2017, 7:00 IST
ರಟ್ಟೀಹಳ್ಳಿ ಸಮೀಪದ ಮಾಸೂರ ಗ್ರಾಮದ ಮನೋಹರಯ್ಯ ಬೂದಿಹಾಳಮಠರವರು ತಮ್ಮ 10 ಎಕರೆ ಜಮೀನಿನಲ್ಲಿ ಬೆಳೆದ ಪಪ್ಪಾಯಿ, ಈಚೆಗೆ ಧಾರಾಕಾರ ಮಳೆಗೆ ಹಾಳಾಗುತ್ತಿದೆ
ರಟ್ಟೀಹಳ್ಳಿ ಸಮೀಪದ ಮಾಸೂರ ಗ್ರಾಮದ ಮನೋಹರಯ್ಯ ಬೂದಿಹಾಳಮಠರವರು ತಮ್ಮ 10 ಎಕರೆ ಜಮೀನಿನಲ್ಲಿ ಬೆಳೆದ ಪಪ್ಪಾಯಿ, ಈಚೆಗೆ ಧಾರಾಕಾರ ಮಳೆಗೆ ಹಾಳಾಗುತ್ತಿದೆ   

ರಟ್ಟೀಹಳ್ಳಿ: ಸತತ ಬರಗಾಲದ ಛಾಯೆಯ ಮಧ್ಯದಲ್ಲಿಯೇ ಕೊಳವೆಬಾವಿ, ಕೆರೆ ನೀರು, ಕಾಲುವೆ ನೀರು ಸೇರಿದಂತೆ ಬಲ್ಲ ನೀರಿನ ಮೂಲಗಳಿಂದ ರಾತ್ರಿ ಹಗಲೆನ್ನದೇ ಸಾಲಸೂಲ ಮಾಡಿ ಸಮೃದ್ಧವಾಗಿ ಬೆಳೆದ ಪಪ್ಪಾಯಿ ಬೆಳೆಗೆ, ಸೂಕ್ತ ಬೆಲೆ ಸಿಗದೇ ಆ ರೈತ ಮತ್ತಷ್ಟೂ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಇದು ರಟ್ಟೀಹಳ್ಳಿ ಸಮೀಪದ ಮಾಸೂರ ಗ್ರಾಮದ ಮನೋಹರಯ್ಯ ಬೂದಿಹಾಳಮಠ ಎಂಬುವವರು ತಮ್ಮ 10ಎಕರೆ ಜಮೀನಿನಲ್ಲಿ ಪಪ್ಪಾಯಿ ಬೆಳೆದ ಸದ್ಯದ ಸ್ಥಿತಿ. ಎಷ್ಟೇ ಕಷ್ಟಗಳಿದ್ದರು ಅವುಗಳನ್ನು ಬದಿಗೊತ್ತಿ ಬೆಳೆಯನ್ನು ಸಮೃದ್ಧವಾಗಿ ಬೆಳೆಸಬೇಕು ಎಂಬುವುದು ಪ್ರತಿಯೊಬ್ಬ ರೈತರ ಹೆಬ್ಬಯಕೆ.

ಅಂತೆಯೇ ಇವರು ಕೂಡಾ ನಮ್ಮ 10ಎಕರೆ ಜಮೀನಿನಲ್ಲಿ ಅನೇಕ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಒಟ್ಟು 6,200 ಪಪ್ಪಾಯಿ ಗಿಡಗಳನ್ನು ಬೆಳೆಸಿದ್ದಾರೆ. ಆದರೆ, ಈಗ ಸಮೃದ್ಧವಾಗಿ ಬೆಳೆದು ಬೆಳೆ ಕೈ ಸೇರುವ ಹಂತದಲ್ಲಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದೇ ಅವರು ಕಾರಣಕ್ಕೆ ಅವರು ತಮ್ಮ ಬದುಕಿನಲ್ಲಿ ಮತ್ತಷ್ಟು ಕಂಗಾಲಾಗಿದ್ದಾರೆ.

ADVERTISEMENT

ಮನೋಹರಯ್ಯನವರ ಮಡದಿ ಗಿರಿಜಮ್ಮನವರು ಪ್ರತಿಯೊಂದು ಪಪ್ಪಾಯಿ ಗಿಡಗಳನ್ನು ಮಕ್ಕಳಂತೆ ಆರೈಕೆ ಮಾಡಿದ್ದಾರೆ. ಸಸಿ ನಾಟಿಯಿಂದ ಈ ವರೆಗೆ ಸುಮಾರು ₨6ಲಕ್ಷ ವೆಚ್ಚ ಮಾಡಿದ್ದೇವೆ. ಈಗ ಪಪ್ಪಾಯಿ ತೋಟ ನೋಡುಗರ ಕಣ್ಣು ಕುಕ್ಕುವಂತಿವೆ, ಭೂಮಿಯಿಂದ ಕೇವಲ ಒಂದು ಅಡಿ ಎತ್ತರದಲ್ಲಿ ಬಾಳೆಗೊನೆಗಳಂತೆ ಪಪ್ಪಾಯಿ ಕಂಗೊಳಿಸುತ್ತಿವೆ. ಒಂದೊಂದು ಪಪ್ಪಾಯಿ ಸುಮಾರು 3ಕೆ.ಜಿ. ತೂಗುತ್ತಿವೆ. ಆದರೆ, ಅದಕ್ಕೆ ಉತ್ತಮ ಬೆಲೆ ಸಿಗುವ ಅದೃಷ್ಟ ಮಾತ್ರ ಇಲ್ಲದಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಪಪ್ಪಾಯಿಗೆ ಪ್ರತಿ ಕೆಜಿಗೆ ಕೇವಲ ₨6 ರಿಂದ ₨10ರ ವರೆಗೆ ದೊರೆಯುತ್ತಿದೆ. ಪ್ರತಿ ಕೆಜಿಗೆ ಹೆಚ್ಚೆನೂ ಬೇಡ ಕೇವಲ ₨15 ಸಿಕ್ಕರೆ ಸಾಕು ಅಲ್ಪ ಲಾಭದಲ್ಲಿಯೇ ಸಂತೋಷ ಪಡುತ್ತೇನೆ ಎಂದು ಮನೋಹರಯ್ಯ ಬೂದಿಹಾಳಮಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆಗೆ ಪಪ್ಪಾಯಿ ಹಾನಿ: ಈಚೆಗೆ ಸುರಿದ ಧಾರಾಕಾರ ಮಳೆಗೆ ಪಪ್ಪಾಯಿ ಹಣ್ಣುಗಳು ಗಿಡದಲ್ಲಿಯೆ ಕೊಳೆಯುತ್ತಿವೆ. ಪ್ರತಿ ಗಿಡಗಳಲ್ಲಿ ಒಂದೆರೆಡು ಹಣ್ಣುಗಳು ಈಗಾಗಲೇ ಕೊಳೆತಿವೆ. ಅಷ್ಟೇ ಅಲ್ಲದೇ, ಮಳೆಗೆ ಪಪ್ಪಾಯಿ ಹೂವು ಕೂಡಾ ಉದುರಿ ಹೋಗಿದ್ದು, ಮುಂದಿನ ದಿನಗಳಲ್ಲಿ ಇಳುವರಿಯಲ್ಲಿಯೂ ಕೂಡಾ  ಕುಸಿತ ಕಾಣುವುದು ಕಂಡಿತ ಎಂದು ತಮ್ಮ ನೋವನ್ನು ಹೇಳಿಕೊಂಡರು.

ವಿನಾಯಕ ಭೀಮಪ್ಪನವರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.