ADVERTISEMENT

ಸರಗಳ್ಳತನ ತಡೆಗೆ ‘ಕ್ಯಾಮೆರಾ ಕಣ್ಣು’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 9:21 IST
Last Updated 23 ಡಿಸೆಂಬರ್ 2013, 9:21 IST

ಹಾವೇರಿ: ಹಾಡ ಹಗಲೇ ಮಹಿಳೆಯರ ಮಾಂಗಲ್ಯ ಸರ ಕಿತ್ತು ಪರಾರಿಯಾಗುವ ಖದೀಮರ ಪತ್ತೆಗೆ ಜಿಲ್ಲಾ ಪೊಲೀಸ್‌ ಇಲಾಖೆ ಸಿಸಿ ಕ್ಯಾಮೆರಾ ಕಣ್ಗಾವಲು ಅಳವಡಿಸುವ ಮೂಲಕ ನಗರದಲ್ಲಿ ನಡೆಯುತ್ತಿದ್ದ ಸರಗಳ್ಳತನ ಸೇರಿದಂತೆ ಇತರ ಅಹಿತಕರ ಘಟನೆಗಳ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ.

ಸರಗಳ್ಳತನದ ಕೇಂದ್ರ ಸ್ಥಾನವೆಂದೇ ಗುರುತಿಸ ಲಾದ ಸ್ಥಳೀಯ ಬಸವೇಶ್ವರ ನಗರದಲ್ಲಿ ಪ್ರಾಯೋ ಗಿಕವಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಇದನ್ನು ಶೀಘ್ರದಲ್ಲಿಯೇ ಇಡೀ ಶಹರಕ್ಕೆ ವಿಸ್ತರಿಸಲು ಪೊಲೀಸ್‌ ಇಲಾಖೆ ಚಿಂತನೆ ನಡೆಸಿದೆ.

ನಗರದಲ್ಲಿ ಇತ್ತೀಚಿನ ಎರಡೂ ವರ್ಷಗಳಲ್ಲಿ ಸರಗಳ್ಳತನ ಹೆಚ್ಚಾಗಿ ನಡೆದಿವೆ. ನಗರವೊಂದ ರಲ್ಲಿಯೇ ಸುಮಾರ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಎಂಟು ಪ್ರಕರಣಗಳು ಬಸವೇಶ್ವರ ನಗರವೊಂದರಲ್ಲಿಯೇ ನಡೆದಿವೆ.

ಬೈಕ್‌ನಲ್ಲಿ ಬರುವ ಮುಸುಕುದಾರಿ ಯುವಕರು, ಮನೆ ಬಾಗಿನಲ್ಲಿ ನಿಂತ, ಇಲ್ಲವೇ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯರನ್ನು ಮಾತನಾಡಿಸುವಂತೆ ನಟಿಸಿ ಅವರ ಕೊರಳಲ್ಲಿರುವ ಸರ ಇಲ್ಲವೇ ಮಾಂಗಲ್ಯ ವನ್ನು ಕಿತ್ತು ಪರಾರಿಯಾಗುತ್ತಿದ್ದರು. ಇಂತಹ ಪ್ರಕರಣಗಳು ತಿಂಗಳು, ಎರಡು ತಿಂಗಳಿಗೊಮ್ಮೆ ಬಸವೇಶ್ವರ ನಗರದಲ್ಲಿ ಮಾಮೂಲಿ ಎನ್ನುವಂತಾಗಿತ್ತು.

ಫಲಕೊಡದ ಜಾಗೃತಿ: ಪ್ರಕರಣಗಳು ಹೆಚ್ಚಾಗು ತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್‌ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.

ಮನೆಯಲ್ಲಿರುವಾಗಿ ಇಲ್ಲವೇ ಒಬ್ಬಂಟಿಗರಾಗಿ ಹೋಗುವ ಸಂದರ್ಭದಲ್ಲಿ ಬಂಗಾರದ ಆಭರಣ ಧರಿಸದಂತೆ, ಪಾಲೀಷ್‌ ಮಾಡಿಕೊಡುವ ನೆಪದಲ್ಲಿ ಬಂದು ಮೋಸ ಮಾಡುವವರು ಹಾಗೂ ಸಂಶಯಾಸ್ಪದವಾಗಿ ಓಡಾಡುವ ಅಪರಿಚಿತರ ಬಗ್ಗೆ ಎಚ್ಚರಿಕೆ ಇರಬೇಕು. ಸಂಶಯ ಬಂದರೆ ಠಾಣೆಗೆ ಮಾಹಿತಿ ನೀಡಬೇಕು ಎಂಬ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿತ್ತಲ್ಲದೇ, ಬಿತ್ತಿ ಪತ್ರಗಳನ್ನು ಮುದ್ರಿಸಿ ನಗರದ ಪ್ರಮುಖ ಪ್ರದೇಶಗಳಲ್ಲಿ ಅಂಟಿಸಿತ್ತು.ಇದಕ್ಕೆ ಪೂರಕವಾಗಿ ರಾತ್ರಿ ಗಸ್ತು ತಿರುಗುವ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಿತ್ತಲ್ಲದೇ, ಪೊಲೀಸರನ್ನು ಸಾಮಾನ್ಯರಂತೆ ಸಿವಿಲ್‌ ಡ್ರೆಸ್‌ ಮೇಲೆ ಕರ್ತವ್ಯ ನಿರ್ವಹಣೆಗೆ ನಿಯೋಜನೆ ಮಾಡಿ ಕಳ್ಳರ ಪತ್ತೆಗೆ ಬಲೆ ಬೀಸಿತ್ತು.

ಇಲಾಖೆಯ ಈ ಕ್ರಮಗಳಿಂದ ಪ್ರಕರಣಗಳ ಸಂಖ್ಯೆ ಇಳಿಮುಖವಾದರೂ, ಸಂಪೂರ್ಣ ಸ್ಥಗಿತಗೊ ಳಿಸಲು ಸಾಧ್ಯವಾಗಿರಲಿಲ್ಲ.  ಇದರಿಂದ ಕಳ್ಳರನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪವನ್ನು ಇಲಾಖೆ ಎದುರಿಸಬೇಕಾಯಿತು (ಇತ್ತೀಚಿನ ಒಂದು ಪ್ರಕರಣ ಪತ್ತೆಯಾಗಿದ್ದು ಬಿಟ್ಟರೆ, ಉಳಿದೆಲ್ಲ ಪ್ರಕರಣಗಳು ನಿಗೂಢವಾಗಿಯೇ ಉಳಿದಿವೆ).

ಉತ್ತಮ ಕೆಲಸ: ಪೊಲೀಸ್‌ ಇಲಾಖೆ ಸರಗಳ್ಳತನ ತಡೆಯಲು ಬಸವೇಶ್ವರ ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲಾಖೆ ಸಿಸಿ ಕ್ಯಾಮೆರಾ ಅಳವಡಿಸಿರುವುದು ಉತ್ತಮ ನಿರ್ಧಾರವಾಗಿದ್ದು, ಬಸವೇಶ್ವರ ನಗರಕ್ಕಷ್ಟೇ ಸಿಮೀತಗೊಳಿಸದೇ ನಗರದ ಎಲ್ಲ ಪ್ರಮುಖ ಸ್ಥಳಗಳಲ್ಲಿ ಅಳವಡಿಸಬೇಕು. ಆಗ ಮಾತ್ರ ಇಂತಹ ಪ್ರಕರಣಗಳನ್ನು ಸಂಪೂರ್ಣ ತಡೆಯಲು ಸಾಧ್ಯವಾಗುತ್ತದೆ ಎಂದು ಬಸವೇಶ್ವರ ನಗರದ ನಿವಾಸಿ ತೇಜಸ್ವಿನಿ ಕಾಶೆಟ್ಟಿ ಹೇಳುತ್ತಾರೆ.

ಕ್ಯಾಮರಾ ಕಣ್ಗಾವಲು: ನಗರದಲ್ಲಿ ನಡೆಯುವ ಸರಗಳ್ಳತನ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು, ಈಗಾಗಲೇ ಬಹಳಷ್ಟು ನಿಯಂತ್ರಣ ವಾಗಿದೆ. ಮುಂದೆಯೂ ಕೂಡಾ ಇಂತಹ ಪ್ರಕರಣ ಗಳು ನಡೆಯಬಾರದು ಎನ್ನುವ ಉದ್ದೇಶದಿಂದ ಬಸವೇಶ್ವರ ನಗರದ ಮುಖ್ಯ ರಸ್ತೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ತಿಳಿಸಿದರು.

ಇದು ಕೇವಲ ಸರಗಳ್ಳರ ಬಗ್ಗೆ ಕಣ್ಗಾವಲು ಇಡುವುದಕಷ್ಟೇ ಅಲ್ಲದೇ ಪುಂಡುತನ ಮಾಡುವ ಕಾಲೇಜು ವಿದ್ಯಾರ್ಥಿಗಳ ಚಲನವಲನದ ಬಗ್ಗೆ ನಿಗಾವಹಿಸಲಿದೆ. ಇದೊಂದು ಪ್ರಾಯೋಗಿಕ ಕಾರ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಶಹರವ್ಯಾಪಿ ವಿಸ್ತರಿಸಲು ಯೋಜನೆ ರೂಪಿಸಲಾ ಗಿದೆ. ಜಿಲ್ಲಾಡಳಿತದ ಇಲ್ಲವೇ ದಾನಿಗಳ ಸಹಕಾರ ದೊಂದಿಗೆ ಅದನ್ನು ಆದಷ್ಟೇ ಬೇಗನೆ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.