
ಶಿಗ್ಗಾವಿ: ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಬೇಕು. ಕೂಲಿಕಾರ್ಮಿಕರು, ಬಡವರು ಹಾಗೂ ಹಿಂದುಳಿದ ಜನರಿಗೆ ಸರ್ಕಾರ ಹಲವಾರು ಯೋಜನೆಗಳ ಮೂಲಕ ಅವರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಸೌಲಭ್ಯಗಳನ್ನು ನೀಡುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಅದನ್ನು ಅನುಷ್ಠಾನಕ್ಕೆ ತರುವ ಪ್ರಮಾಣಿಕ ಕಾರ್ಯವಾಗಬೇಕು ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಸೋಮವಾರ ವಿವಿಧ ಫಲಾನುಭವಿಗಳಿಗೆ ಎಸ್.ಎಫ್.ಸಿ ನಿಧಿಯಿಂದ ಕೊಡಮಾಡುವ ವಿವಿಧ ವಸ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಪುರಸಭೆಯ 2023-24 ಮತ್ತು 2024-25ನೇ ಸಾಲಿನ ಎಸ್ಎಫ್.ಸಿ ನಿಧಿಯಿಂದ ವಿವಿಧ ಉದ್ದೇಶಕ್ಕಾಗಿ ನೀಡಬಹುದಾದ ವಿವಿಧ ಸಾಧನ ಮತ್ತು ವಸ್ತುಗಳನ್ನು ವಿತರಿಸಲಾಗಿದೆ ಎಂದರು.
ಚುನಾಯಿತ ಪ್ರತಿನಿಧಿಗಳು ಶಿಗ್ಗಾವಿ ಪುರಸಭೆಗೆ ಇಲ್ಲದಿರುವುದರಿಂದ ಅಧಿಕಾರಿಗಳು ಸಾರ್ವಜನಿಕರ ಸೇವೆಯಲ್ಲಿ ವಿಳಂಬ ಧೋರಣೆಯನ್ನು ಮಾಡಬಾರದು, ಜನರ ಸಮಸ್ಯೆಗಳಿಗೆ ಕೂಡಲೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು. ಉತಾರ ಸೇರಿದಂತೆ ಪಟ್ಟಣ ನಿವಾಸಿಗಳಿಗೆ ಅವಶ್ಯವಿರುವ ಪೂರಕ ದಾಖಲಾತಿಗಳನ್ನು ಸಕಾಲದಲ್ಲಿ ಒದಗಿಸಬೇಕು ಎಂದರು.
ಪಟ್ಟಣದ ಪುರಸಭೆಯ ನಿಧಿಯಿಂದ ನೀಡಲಾಗಿರುವ ವಸ್ತುಗಳನ್ನು ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದೊಂದಿಗೆ ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲಲು ಅವಶ್ಯವಿರುವ ಪುಸ್ತಕಗಳನ್ನು ಪುರಸಭೆಯ ಅಧಿಕಾರಿಗಳು ವಿತರಿಸಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು ಎಂದರು.
ಪಟ್ಟಣದ ಪುರಸಭೆಯ 2023-24 ಮತ್ತು 2024-25ನೇ ಸಾಲಿನ ಎಸ್.ಎಫ್.ಸಿ ನಿಧಿಯಿಂದ ಪುರಸಭೆಯ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುವ ಅಂಗವಿಕಲರಿಗಾಗಿ ಅಲ್ಮೇರ, ಹಿಂದುಳಿದ ವರ್ಗಗಳ ಬಾಲಕಿಯರ ವಸತಿನಿಲಯಕ್ಕೆ 2 ಸೆಟ್ ಕಂಪ್ಯೂಟರ್ ಮತ್ತು ಪ್ರಿಂಟರ್, 12 ಶ್ರವಣದೋಷಿ ಫಲಾನುಭವಿಗಳಿಗೆ ಶ್ರವಣ ಕಿಟ್, ಸರ್ಕಾರಿ ಪ್ರೌಢ ಶಾಲೆಗೆ ಪ್ರೊಜೆಕ್ಟರ್ ಮತ್ತು ಸ್ಕ್ರೀನ್, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ವಿತರಿಸಲಾಗಿದೆ ಎಂದರು.
ವಿಭಾಗಾಧಿಕಾರಿ ಶುಭಂ ಶುಕ್ಲಾ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಆರ್, ಗೌಸಖಾನ್ ಮುನಸಿ, ವಸಂತಾ ಬಾಗೂರ, ಚಂದ್ರು ಕೊಡ್ಲಿವಾಡ, ಎಸ್.ಎಫ್.ಮಣಕಟ್ಟಿ, ಗುಡ್ಡಪ್ಪ ಜಲದಿ, ಮುನ್ನಾ ಲಕ್ಷ್ಮೇಶ್ವರ, ಜಾಫರ ಪಠಾಣ, ಅಣ್ಣಪ್ಪ ಲಮಾಣಿ, ರಮೇಶ ದುಗ್ಗತ್ತಿ, ಗಿರೀಶ ಬೈಲವಾಳ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.