ADVERTISEMENT

‘ಮನೋವಿಕಾಸವೇ ನಾಟಕದ ಉದ್ದೇಶ’

ಸಾಣೇಹಳ್ಳಿಯ ಶಿವಸಂಚಾರ ತಂಡದವರಿಂದ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 9:18 IST
Last Updated 3 ಡಿಸೆಂಬರ್ 2013, 9:18 IST

ಹಿರೇಕೆರೂರ: ಜನರ ಮನಸ್ಸಿನ ಕೊಳೆ ಯನ್ನು ತೊಳೆಯುವ ಪ್ರಮುಖ ಮಾಧ್ಯಮ ನಾಟಕ. ನಾಟಕಗಳ ಉದ್ದೇಶ ಕೇವಲ ಮನರಂಜನೆ ಅಲ್ಲ; ಮನೋವಿಕಾಸ, ನಾಟಕದ ತಿರುಳನ್ನು ಅರ್ಥ ಮಾಡಿಕೊಂಡು ಆಚರಣೆಗೆ ತಂದರೆ ಶಿವಸಂಚಾರ ತಂಡದ ಶ್ರಮ ಸಾರ್ಥಕವಾಗುತ್ತದೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಸಿಇಎಸ್ ಆವರಣದಲ್ಲಿ ಭಾನುವಾರ ಸಾಧು ಸದ್ಧರ್ಮ ವೀರ ಶೈವ ಸಂಘ ಹಾಗೂ ಸರ್ವಜ್ಞ ಸ್ಮಾರಕ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಣೇಹಳ್ಳಿ ಶಿವಸಂಚಾರ ಕಲಾ ತಂಡದ ನಾಟಕೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮೌಢ್ಯವನ್ನು ಬಿತ್ತುವ ಕೆಲಸವನ್ನು ಕೆಲವರು ಮಾಡುತ್ತಾರೆ. ಮನುಷ್ಯನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮತ್ತು ಹಿಂಸೆಗೆ ಪ್ರೇರಣೆ ನೀಡುವ ಯಾವುದೇ ಆಚರಣೆ ಗಳು ನಿಲ್ಲಬೇಕು. ಮಾರಿ ಜಾತ್ರೆಯ ಹಿಂದಿರುವ ಷಡ್ಯಂತ್ರವನ್ನು ಅರ್ಥ ಮಾಡಿಕೊಳ್ಳಬೇಕು. ಮಾಂಸಹಾರಕ್ಕೆ ನಮ್ಮ ವಿರೋಧವಿಲ್ಲ, ಅದನ್ನು ಮನೆಯಲ್ಲಿ ತಿನ್ನುವವರು ತಿನ್ನಬಹುದು. ಲಿಂಗಾಯತರು ಮಾಂಸಾಹಾರ ತಿನ್ನಬಾರದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಶಾಸಕ ಯು.ಬಿ.ಬಣಕಾರ, ಧರ್ಮದ ತಳಹದಿಯ ಮೇಲೆ ಬದುಕು ಸಾಗಿಸಬೇಕು. ಒಳ್ಳೆಯ ಆಚಾರ, ವಿಚಾರಗಳನ್ನು ಬಿತ್ತಲು ಶಿವಸಂಚಾರ ಕಲಾ ತಂಡವು ನಾಟಕಗಳ ಮೂಲಕ ಶ್ರಮಿಸುತ್ತಿದೆ. ನಾಟಕಗಳಲ್ಲಿ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿ ಕೊಂಡು ಹೋಗುವುದು ಎಲ್ಲರ ಕರ್ತವ್ಯ ಎಂದರು.

ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿ, ಪುಟ್ಟ ಗ್ರಾಮವಾದ ಸಾಣೇಹಳ್ಳಿಯಲ್ಲಿ ಜನಿಸಿದ ಶಿವಸಂಚಾರ ಕಲಾ ತಂಡವು ಇಂದು ದೇಶ, ವಿದೇಶಗಳಲ್ಲಿಯೂ ಕನ್ನಡನಾಡು ಹಾಗೂ ಭಾರತೀಯ ಸಂಸ್ಕೃತಿಯನ್ನು ಹರಡಲು ಶ್ರಮಿಸುತ್ತಿದೆ. ನಾಟಕಗಳ ಮೂಲಕ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಬಯಲಿ ಗೆಳೆದು ಜನತೆಯನ್ನು ಜಾಗೃತಗೊಳಿಸು ತ್ತಿದೆ ಎಂದು ಹೇಳಿದರು.

ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಲಿಂಗರಾಜ ಚಪ್ಪರದಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಸಿಇಎಸ್ ಅಧ್ಯಕ್ಷ ಎಸ್.ಬಿ.ತಿಪ್ಪಣ್ಣ ನವರ, ಪಿ.ಎಲ್.ಡಿ ಬ್ಯಾಂಕ್ ಉಪಾ ಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಬಿ.ಎಸ್.ಸಣ್ಣಗೌಡ್ರ, ಬಿ.ಎಸ್.ಪಾಟೀಲ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಪ್ರೊ. ಎಸ್.ಬಿ. ಚನ್ನಗೌಡ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.