ಹಾವೇರಿ: ಸಸ್ಯ ಸಂಜೀವಿನಿ ಅಗ್ರಿ ಮತ್ತು ಅಲೈಡ್ ಸರ್ವಿಸಸ್ ಹಾಗೂ ದಾವಣಗೆರೆ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ತಾಲ್ಲೂಕಿನ ಆಲದಕಟ್ಟಿ ಗ್ರಾಮದ ಗುರುಬಸಪ್ಪ ಬೀದಿಮನಿ ಅವರ ತೋಟದಲ್ಲಿ ಬಿಟಿಹತ್ತಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ವೇಳೆ ಸಾವಯವ ಕೃಷಿಕ ಚನ್ನಬಸಪ್ಪ ಕೊಂಬಳಿ ಮಾತನಾಡಿ, ಮಣ್ಣು ಒಂದು ಜೀವಂತ ವಸ್ತು. ಮಣ್ಣಿನಲ್ಲಿ ಕಣ್ಣಿಗೆ ಕಾಣದ ಕೋಟ್ಯಾಂತರ ಸೂಕ್ಷ್ಮ ಜೀವಿಗಳಿವೆ. ಹೊಲಗಳಿಗೆ ಹಾಕುವ ರಸಾಯನಿಕ ಗೊಬ್ಬರ ದಿಂದ ಸೂಕ್ಷ್ಮ ಜೀವಿಗಳು ಮರಣ ಹೊಂದುವುದರಿಂದ ಮಣ್ಣು ತನ್ನ ಜೀವಂತಿಕೆ ಕಳೆದುಕೊಳ್ಳುತ್ತದೆ’ ಎಂದರು.
ವಿಷಯುಕ್ತ ನೀರು, ವಿಷಯುಕ್ತ ಮಣ್ಣು, ವಿಷಯುಕ್ತ ಆಹಾರದಿಂದ ದೂರ ಉಳಿಯಲು ಹಾಗೂ ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬ ರೈತರು ಸಾವಯವ ಕೃಷಿಯನ್ನು ಕೈಗೊಳ್ಳಲು ಮುಂದಾಗಬೇಕು’ ಎಂದು ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ಹತ್ತಿ, ಹಿರೇಕಾಯಿ, ಈರುಳ್ಳಿ, ಭತ್ತ, ಗೋವಿನಜೋಳ, ಎಲೆಬಳ್ಳಿ ಮಣಸಿನಕಾಯಿ, ಕಬ್ಬು ಇತ್ಯಾದಿ ಬೆಳೆಗಳನ್ನು ಬೆಳೆದ ರೈತರು ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಸ್ಯ ಸಂಜೀವಿನಿ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ, ಕೃಷಿ ತಜ್ಞ ಶಿವಕುಮಾರ, ಮಾದರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ. ಶಿವಕುಮಾರ, ಡಿ.ಕೆ.ಪ್ರಕಾಶ, ನಿಂಗಪ್ಪ ಕೊಂಬಳಿ, ಬೀರಪ್ಪ ಕೊಸರಣ್ಣನವರ, ಶಂಕರಗೌಡ ಪಾಟೀಲ, ರಾಜಣ್ಣ ಪುರದ, ಪ್ರಕಾಶ ಅಂದ್ರಾಳ, ಪ್ರಕಾಶ ವರದಹಳ್ಳಿ, ಶಂಬಣ್ಣ, ರಾಮಣ್ಣ ದಿಡಗೂರ ಸುಭಾಷ್ ಹೊಸಳ್ಳಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.