ADVERTISEMENT

ನಿರುದ್ಯೋಗ ಮುಕ್ತವಾಗಿಸಲು ಪಣ: ಕೋಳಿವಾಡ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 13:29 IST
Last Updated 2 ಜೂನ್ 2023, 13:29 IST
ರಾಣೆಬೆನ್ನೂರಿನ ವನ್ಯಜೀವಿ ನಿಸರ್ಗಧಾಮದಲ್ಲಿ ಹಮ್ಮಿಕೊಂಡಿದ್ದ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿದರು
ರಾಣೆಬೆನ್ನೂರಿನ ವನ್ಯಜೀವಿ ನಿಸರ್ಗಧಾಮದಲ್ಲಿ ಹಮ್ಮಿಕೊಂಡಿದ್ದ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿದರು   

ರಾಣೆಬೆನ್ನೂರು: ಯುವಕರು ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಬೆಳೆಸಿಕೊಳ್ಳಬೇಕು. ವಿವಿಧ ತರಬೇತಿಗಳನ್ನು ಪಡೆಯಬೇಕು. ಇದರಿಂದ ಉದ್ಯೋಗ ಸೃಷ್ಟಿಸಿಕೊಳ್ಳಬಹುದು. ತಾಲ್ಲೂಕನ್ನು ನಿರುದ್ಯೋಗ ಮುಕ್ತವನ್ನಾಗಿಸಲು ಪಣ ತೊಟ್ಟಿದ್ದು, ನಿರುದ್ಯೋಗಿ ಯುವಕರು ನನ್ನನ್ನು ಭೇಟಿ ಮಾಡಬಹುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿನ ವನ್ಯಜೀವಿ ನಿಸರ್ಗ ಧಾಮದಲ್ಲಿ ಟೆರ್‌ ಡೇಸ್‌ ಹೋಮ್ಸ್‌ ಸಹಯೋಗದಲ್ಲಿ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ  ಏರ್ಪಡಿಸಿದ್ದ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಕೆಕೆ ಸಂಸ್ಥೆಯಿಂದ ಎಂಟು ಉದ್ಯೋಗ ಮೇಳಗಳನ್ನು ಮಾಡಿ, 12 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡಿಸಲಾಗಿದೆ. ಪಿಕೆಕೆ ಸಂಸ್ಥೆ ವೃತ್ತಿ ಕೌಶಲ ತರಬೇತಿ ನೀಡುತ್ತಿದ್ದು,  ಯುವಜನತೆ ಇದರ ಸದುಪಯೋಗ ಪಡೆಯಬೇಕು ಎಂದರು.

ADVERTISEMENT

ಬ್ಯಾಡಗಿ, ರಾಣೆಬೆನ್ನೂರು, ಹಿರೇಕೆರೂರು ತಾಲ್ಲೂಕಿನ 50ಕ್ಕೂ ಹೆಚ್ಚು ಯುವಕರು ತರಬೇತಿಯಲ್ಲಿ ಭಾಗವಹಿಸಿದ್ದರು.

ಬೆಂಗಳೂರಿನ ಕೆಸರಗದ್ದೆ ಯೂಥ್ ನೆಟ್‌ವರ್ಕ್‌ನ ಜನಾರ್ಧನ, ವಿಜಯಕುಮಾರ ಅವರು ವಿಡಿಯೋ ಸಂವಾದದ ಮೂಲಕ ತರಬೇತಿ ನೀಡಿದರು.

ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಮುಖ್ಯಸ್ಥ ಎಸ್.ಡಿ.ಬಳಿಗಾರ, ಮಲ್ಲಮ್ಮ, ಎಚ್.ವಿ.ತರನ್ನುಮ್ ಖತೀಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.