ರಟ್ಟೀಹಳ್ಳಿ: ದೇಶದ ಜನರನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಮಾ ಲೋಕದಲ್ಲಿ ತೇಲಿಸುತ್ತಿದೆ. ಮತ್ತೊಮ್ಮೆ ಈ ದೇಶದ ಆಡಳಿತ ಬಿಜೆಪಿ ನೇತೃತ್ವದ ಮೋದಿ ಕೈಗೆ ಹೋದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಂತ್ಯಗೊಳ್ಳಲಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಡಿ.ಆರ್. ಪಾಟೀಲ ಭವಿಷ್ಯ ನುಡಿದರು.
ಪಟ್ಟಣದ ಶಾದಿಮಹಲ್ ಸಭಾಭವನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ವಿದ್ಯಾವಂತರಿಗೆ ಉದ್ಯೋಗದ ಅವಕಾಶವಿಲ್ಲ. ದೇಶದ ಶೇ 40 ಸಂಪತ್ತು ಕೇವಲ ಶ್ರೀಮಂತ ಕುಟುಂಬಗಳ ನೂರಾರು ಮಂದಿಯ ಬಳಿಯಲ್ಲಿದೆ. ಮೋದಿ ಸರ್ಕಾರ ಇಂದು ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರದಲ್ಲಿ ತೊಡಗಿದೆ. ಮೋದಿ ಒಬ್ಬರೇ ಕೇಂದ್ರದಲ್ಲಿ ಏಕಚಕ್ರಾಧಿಪತ್ಯ ನಡೆಸುವಂತೆ ಭಾಸವಾಗುತ್ತಿದೆ. ಇದೀಗ 2047ಕ್ಕೆ ವಿಕಸಿತ ಭಾರತ ಎಂದು ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಹಿಂದಿನ ಸರ್ಕಾರದ ಮಾಜಿ ಸಚಿವರೊಬ್ಬರನ್ನು ಸೋಲಿಸಿದಂತೆ ಅದೇ ಸರ್ಕಾರದ ಮಾಜಿ ಮುಖ್ಯಮಂತ್ರಿಯನ್ನು ಸೋಲಿಸುವ ಸಂದರ್ಭ ಇದೀಗ ಬಂದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳು ಲೋಕಸಭೆಯ ನಂತರ ಅಂತ್ಯಗೊಳ್ಳಲಿವೆ ಎಂದು ವಿರೋಧ ಪಕ್ಷದವರು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಅವಧಿವರೆಗೂ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲಿದೆ. ಒಂದು ವೇಳೆ ಗ್ಯಾರಂಟಿ ಯೊಜನೆಗಳು ಸ್ಥಗಿತಗೊಂಡರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಗ್ಯಾರಂಟಿ ಯೋಜನೆಗಳು ಮುಂದುವರೆದರೆ ಟೀಕಿಸುವವರು ರಾಜಕೀಯ ನಿವೃತ್ತಿ ಹೋದುವರೇ? ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಬಿಎಚ್. ಬನ್ನಿಕೋಡ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ, ಎ.ಕೆ. ಪಾಟೀಲ, ಮಹೇಶ ಗುಬ್ಬಿ, ಹನುಮಂತಗೌಡ ಭರಮಣ್ಣನವರ, ಹೇಮಣ್ಣ ಮುದಿರೆಡ್ಡೇರ, ರವೀಂದ್ರ ಮುದಿಯಪ್ಪನವರ, ಪ್ರಕಾಶ ಬನ್ನಿಕೋಡ, ವಸಂತ ದ್ಯಾವಕ್ಕಳವರ, ಉಳಿವೆಪ್ಪ ಸಾಲಿ, ನಿಂಗಪ್ಪ ಚಳಗೇರಿ, ವಿನಯ ಪಾಟೀಲ, ಪರಮೇಶ್ವರಪ್ಪ ಕಟ್ಟೇಕಾರ, ಷಣ್ಮುಖಯ್ಯ ಮಳಿಮಠ, ವೀರನಗೌಡ ಪ್ಯಾಟೀಗೌಡ್ರ, ನಿಂಗಪ್ಪ ಕಡೂರ, ನಾಗನಗೌಡ ಕೋಣ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.