ADVERTISEMENT

ವಸತಿ ಸಮಸ್ಯೆಯಾಗದಂತೆ ಕ್ರಮ: ಶಾಸಕ ವಿರುಪಾಕ್ಷಪ್ಪ ಬಳ್ಳಾರಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 16:21 IST
Last Updated 26 ಜನವರಿ 2021, 16:21 IST
ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ 
ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ    

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂದಾಜು 20 ಸಾವಿರ ನೋಂದಾಯಿತ ಸದಸ್ಯರು ಭಾಗವಹಿಸುವ ನಿರೀಕ್ಷೆ ಇದ್ದು, ಯಾವುದೇ ವಸತಿ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಮ್ಮೇಳನದ ವಸತಿ ಅಧ್ಯಕ್ಷರಾದ ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಮ್ಮೇಳನದ ವಸತಿ ವ್ಯವಸ್ಥೆ ಕುರಿತಂತೆ ಉಪ ಸಮಿತಿ ಸದಸ್ಯರೊಂದಿಗೆ ಪೂರ್ವಭಾವಿ ಸಭೆ ನಡೆಸಿ ವಸತಿ ಸೌಕರ್ಯಗಳ ಬಗ್ಗೆ ಸಲಹೆ ಪಡೆದರು.

ಸಿಇಒ ಮೊಹಮ್ಮದ್‌ ರೋಶನ್‌ ಮಾತನಾಡಿ, ‘20 ಸಾವಿರ ಜನರಿಗೆ ವಸತಿ ವ್ಯವಸ್ಥೆ ಮಾಡಬೇಕಾಗಿದೆ. ನೋಂದಣಿ ಕೊನೆಯ ದಿನ ಸಮ್ಮೇಳನಕ್ಕೆ ಬರುವ ಜನರ ನಿರ್ದಿಷ್ಟ ಸಂಖ್ಯೆ ದೊರೆಯಲಿದೆ. 15 ಸಾವಿರ ಜನರು ಸಮ್ಮೇಳನಕ್ಕೆ ಆಗಮಿಸುವ ನಿರೀಕ್ಷೆ ಇದ್ದರೂ ಕನಿಷ್ಠ ಐದು ಸಾವಿರ ಹೆಚ್ಚುವರಿಯಾಗಿ ವಸತಿ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದರು.

ADVERTISEMENT

ಈ ನಿಟ್ಟಿನಲ್ಲಿ ಮುಂದಿನ 48 ತಾಸಿನಲ್ಲಿ ಜಿಲ್ಲೆಯಲ್ಲಿರುವ ಹೋಟೆಲ್‍ಗಳ ಕೊಠಡಿಗಳು, ರೆಜಾರ್ಟ್, ಪ್ರವಾಸಿ ಮಂದಿರ, ಯಾತ್ರಿ ನಿವಾಸ, ಅತಿಥಿಗೃಹ, ವಸತಿ ಶಾಲೆಗಳು, ಹೋಂಸ್ಟೇ, ಅರಣ್ಯ ಇಲಾಖೆ ನಿರೀಕ್ಷಣಾ ಮಂದಿರಗಳಲ್ಲಿ ಲಭ್ಯವಿರುವ ಕೊಠಡಿಗಳು, ಅವುಗಳ ಸ್ಥಿತಿಗಳ ಕುರಿತಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ಸಲ್ಲಿಸಬೇಕು.

ಹಾಗೆಯೇ ಶೈಕ್ಷಣಿಕ ಸಂಸ್ಥೆಗಳು, ಜನಪದ ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳು, ತರಬೇತಿ ಕೇಂದ್ರಗಳಲ್ಲಿರುವ ಕೊಠಡಿಗಳ ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿವಿಧ ವಸತಿ ನಿಲಯ ಹಾಗೂ ಸಮುದಾಯ ಭವನಗಳಲ್ಲಿ ಎಷ್ಟು ಸಂಖ್ಯೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬಹುದು, ಕೊಠಡಿಗಳ ಸಂಖ್ಯೆ ಹಾಗೂ ಸ್ಥಿತಿಗತಿಗಳ ಕುರಿತು ಸಮಾಜ ಕಲ್ಯಾಣ, ಹಿಂದುಳಿದ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.