ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಗ್ನಿಪಥ ಯೋಜನೆಯ ಅಗ್ನಿವೀರರ ನೇಮಕಾತಿ ರ್ಯಾಲಿಯಲ್ಲಿ ಮೂರನೇ ದಿನವಾದ ಶನಿವಾರ 3,274 ಅಭ್ಯರ್ಥಿಗಳು ಹಾಜರಾಗಿದ್ದಾರೆ.
ಈ ಪೈಕಿ 417 ಅಭ್ಯರ್ಥಿಗಳು ಓಟದ ಸ್ಪರ್ಧೆಯಲ್ಲಿ ಪಾಸಾಗಿದ್ದಾರೆ. ಸೆ.4ರಂದು ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಹಾವೇರಿ ಜಿಲ್ಲೆಯ (ಶಿಗ್ಗಾವಿ ತಾಲ್ಲೂಕು ಹೊರತುಪಡಿಸಿ) 3,628 ಅಭ್ಯರ್ಥಿಗಳು ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ.
ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಆಕಾಂಕ್ಷಿಗಳಲ್ಲಿ ಬಹುತೇಕರು ಶೂ ಧರಿಸಿ ಓಡಿದರೆ, ಕೆಲವರು ಬರಿಗಾಲಲ್ಲೇ ಓಡಿದರು. 1600 ಮೀಟರ್ ಓಟದ ಸ್ಪರ್ಧೆಯಲ್ಲಿ ಕೆಲವೇ ಸೆಕೆಂಡುಗಳ ಅಂತರದಲ್ಲಿ ತಡವಾಗಿ ಗುರಿ ಮುಟ್ಟಿದವರು ಸೇನಾಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ಕಾಲಿಗೆ ಬಿದ್ದು, ನಮ್ಮನ್ನು ಮುಂದಿನ ಹಂತದ ಸ್ಪರ್ಧೆಗೆ ಪರಿಗಣಿಸುವಂತೆ ಗೋಗರೆಯುತ್ತಿದ್ದರು.
ಓಟದ ಸ್ಪರ್ಧೆಗಳಲ್ಲಿ ನಿಗದಿತ ಸಮಯದಲ್ಲಿ ಗುರಿ ಮುಟ್ಟುವಲ್ಲಿ ವಿಫಲರಾದ ಆಕಾಂಕ್ಷಿಗಳು ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಬೇಸರದಿಂದ ಊರುಗಳತ್ತ ಹೊರಡುತ್ತಿದ್ದ ದೃಶ್ಯ ಕಂಡು ಬಂದಿತು.
ಜಿಲ್ಲಾ ಗುರುಭವನದ ಮುಂಭಾಗವಿರುವ ‘ಚಾಟ್ ಸ್ಟ್ರೀಟ್’ನಲ್ಲಿ ವಿವಿಧ ಖಾದ್ಯಗಳನ್ನು ತಿನ್ನಲು ಆಕಾಂಕ್ಷಿಗಳು ಮುಗಿಬಿದ್ದಿದ್ದರು. ಅಗ್ನಿಪಥ ನೇಮಕಾತಿ ರ್ಯಾಲಿಯು ಸೆ.20ರವರೆಗೆ ನಡೆಯುವುದರಿಂದ ಉತ್ತಮ ವ್ಯಾಪಾರವಾಗುವ ನಿರೀಕ್ಷೆಯಿದೆ ಎಂದು ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.