ADVERTISEMENT

ಹಾನಗಲ್ | ಬಿತ್ತನೆ ಆರಂಭ: ಡಿಎಪಿ ಕೊರತೆ ಆತಂಕ

ಮಾರುತಿ ಪೇಟಕರ
Published 9 ಜೂನ್ 2025, 5:57 IST
Last Updated 9 ಜೂನ್ 2025, 5:57 IST
ಹಾನಗಲ್ ತಾಲ್ಲೂಕಿನ ಚಿಕ್ಕಾಂಶಿಹೊಸೂರ ಭಾಗದಲ್ಲಿ ಎತ್ತುಗಳ ಸಹಾಯದಿಂದ ಬಿತ್ತನೆ ನಡೆಯುತ್ತಿದೆ.
ಹಾನಗಲ್ ತಾಲ್ಲೂಕಿನ ಚಿಕ್ಕಾಂಶಿಹೊಸೂರ ಭಾಗದಲ್ಲಿ ಎತ್ತುಗಳ ಸಹಾಯದಿಂದ ಬಿತ್ತನೆ ನಡೆಯುತ್ತಿದೆ.   

ಹಾನಗಲ್: ಉತ್ತಮವಾಗಿ ಸುರಿದ ಮುಂಗಾರು ಪೂರ್ವ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ, ತಾಲ್ಲೂಕಿನಲ್ಲಿ ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯಗಳು ಗರಿಗೆದರಿವೆ. ಈ ಬಾರಿ ಡಿಎಪಿ ಕೊರತೆಯಾಗುವ ಆತಂಕವೂ ತಾಲ್ಲೂಕಿನ ರೈತರಲ್ಲಿದೆ.

ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭವಾದ ಮಳೆ ನಿರಂತರವಾಗಿ ಸುರಿದಿತ್ತು. ಜೂನ್‌ ಆರಂಭದಿಂದ ಮಳೆ ಬಿಡುವು ನೀಡಿದ್ದು, ತಾಲ್ಲೂಕಿನಲ್ಲಿ ಶೇ 25ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಅಲ್ಲಲ್ಲಿ ಎತ್ತುಗಳ ಸಹಾಯದಿಂದ ಮತ್ತು ಟ್ರಾಕ್ಟರ್‌ ಮೂಲಕ ಬಿತ್ತನೆ ಮುಂದುವರಿದಿದೆ.

ಮೇ ತಿಂಗಳಲ್ಲಿ ವಾಡಿಕೆ 54.9 ಮಿ.ಮೀ. ಮಳೆಯಿತ್ತು. ಅದನ್ನು ಮೀರಿ 141 ಮಿ.ಮೀ ಮಳೆಯಾಗಿದೆ. ನಾಲ್ಕೈದು ದಿನಗಳಿಂದ ಮಳೆ ವಿರಾಮ ನೀಡಿರುವುದು ಕೃಷಿ ಕೆಲಸಗಳಿಗೆ ಹುರುಪು ತುಂಬಿದೆ.

ADVERTISEMENT

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 46,687 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಮುಖ್ಯವಾಗಿ ಗೋವಿನಜೋಳ 24,254 ಹೆಕ್ಟೇರ್, ಭತ್ತ 14,635 ಹೆಕ್ಟೇರ್, ಸೋಯಾಬಿನ್‌ 2,297 ಹೆಕ್ಟೇರ್, ಹತ್ತಿ 2,220 ಹೆಕ್ಟೇರ್, ಕಬ್ಬು 2,750 ಹೆಕ್ಟೇರ್, ಶೇಂಗಾ 435 ಹೆಕ್ಟರ್ ಬಿತ್ತನೆಯಾಗಬೇಕಿದೆ.

ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳು, ಖಾಸಗಿ ಮಾರಾಟಗಾರರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟವಾಗುತ್ತಿದೆ.

‘ರೈತ ಸಂಪರ್ಕ ಕೇಂದ್ರಗಳ ಮೂಲಕ ಈ ತನಕ 1,427 ಕ್ವಿಂಟಲ್‌ ವಿವಿಧ ಬಿತ್ತನೆ ಬೀಜಗಳು ಮಾರಾಟವಾಗಿವೆ. 1,215 ಕ್ವಿಂಟಲ್‌ ಬೀಜ ದಾಸ್ತಾನು ಇದೆ. ಮುಂಗಾರು ಹಂಗಾಮಿಗೆ 2,500 ಕ್ವಿಂಟಲ್‌ಗೂ ಅಧಿಕ ಬಿತ್ತನೆ ಬೀಜದ ಅವಶ್ಯಕತೆ ಇದೆ’ ಎಂದು ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದ್ದಾರೆ.

‘ನೀರಾವರಿ ಪ್ರದೇಶಕ್ಕೆ ಹೊಂದಿಕೊಂಡಂತೆ 2,145 ಹೆಕ್ಟೇರ್ ಭೂಮಿಯಲ್ಲಿ ಬೇಸಿಗೆಯ ಭತ್ತ ನಾಟಿ ಜನವರಿಯಲ್ಲಿ ನಡೆದಿತ್ತು. ಏಪ್ರಿಲ್ ಕೊನೆಯಲ್ಲಿ ಕಟಾವು ಆರಂಭವಾಗಬೇಕಿತ್ತು. ಮುಂಗಾರು ಪೂರ್ವ ಮಳೆಯ ಅಡಚಣೆ ಕಾರಣಕ್ಕಾಗಿ ನಾಟಿ ಇಳುವರಿ ಕೊಯ್ಲು ವಿಳಂಬವಾಗಿದೆ. ಈತನಕ ಶೇ 70ರಷ್ಟು ಕಟಾವು ಪೂರ್ಣಗೊಂಡಿದೆ. ಜುಲೈ ಮದ್ಯದಿಂದ ಅಗಸ್ಟ್‌ವರೆಗೆ ಮತ್ತೆ ಭತ್ತ ನಾಟಿ ಕಾರ್ಯ ನಡೆಯುತ್ತದೆ’ ಎಂದು ತಿಳಿಸಿದ್ದಾರೆ.

‘ಪೂರ್ವ ಮುಂಗಾರು ಮಳೆಗಳು ತಡವಾಗಿದ್ದರಿಂದ ಭೂಮಿ ಸಿದ್ಧತೆ ಮತ್ತು ಬಿತ್ತನೆ ಕಾರ್ಯ  ತಡವಾಗಿತ್ತು. ಈಗ ಮಳೆ ಬಿಡುವು ನೀಡಿದ್ದು, ಭೂಮಿ ಸಿದ್ಧತೆ ಜೊತೆಗೆ ಬಿತ್ತನೆ ಕಾರ್ಯ ಕೈಗೊಂಡಿದ್ದೇವೆ‘ ಎಂದು ಬಾಳಿಹಳ್ಳಿ ಗ್ರಾಮದ ರೈತ ನಿಂಗರಾಜ ಬೈಚವಳ್ಳಿ ತಿಳಿಸಿದರು.

26,230 ಟನ್‌ ಗೊಬ್ಬರಕ್ಕೆ ಬೇಡಿಕೆ: ‘ಮುಂಗಾರು ಹಂಗಾಮಿಗೆ ಏಪ್ರಿಲ್‌ನಿಂದ ಸೆಪ್ಟಂಬರ್‌ ತನಕ ತಾಲ್ಲೂಕಿಗೆ 26,230 ಟನ್‌ ರಸಗೊಬ್ಬರದ ಅವಶ್ಯಕತೆ ಇದ್ದು, ಇದರ ಪೂರೈಕೆಗಾಗಿ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಈಗ ಮುಂಗಾರು ಹಂಗಾಮು ಆರಂಭಗೊಂಡಿದ್ದು, ಸದ್ಯ 4,591 ಟನ್ ರಸಗೊಬ್ಬರ ದಾಸ್ತಾನು ಇದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಗೊಬ್ಬರ ಬರುವ ನಿರೀಕ್ಷೆಯಿದೆ’ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ಹಾನಗಲ್ ತಾಲ್ಲೂಕಿನ ಬ್ಯಾಗವಾದಿ ಗ್ರಾಮ ವ್ಯಾಪ್ತಿಯಲ್ಲಿ ಟ್ರಾಕ್ಟರ್‌ನಿಂದ ಬಿತ್ತನೆ ಕೈಗೊಳ್ಳಲಾಗಿದೆ.
‘310 ಟನ್‌ ಡಿಎಪಿ ದಾಸ್ತಾನು’
‘ಹಾನಗಲ್ ತಾಲ್ಲೂಕಿನಲ್ಲಿ ಸದ್ಯ 310 ಟನ್‌ ಡಿಎಪಿ ದಾಸ್ತಾನಿದೆ. ಯೂರಿಯಾ 2400 ಟನ್‌ ಕಾಂಪ್ಲೆಕ್ಸ್‌ 1580 ಟನ್‌ ಎಂಒಪಿ 281 ಟನ್‌ ಎಸ್‌ಎಸ್‌ಪಿ 20 ಟನ್‌ ದಾಸ್ತಾನು ಇದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.