ರಾಣೆಬೆನ್ನೂರು: ಬ್ಯಾಡಗಿ ತಾಲ್ಲೂಕಿನ ಕೆರವಡಿ ಗ್ರಾಮದ ರೈತ ಪರಮೇಶ್ವರಪ್ಪ ಮಠದ ಅವರ ಜಮೀನಿನಲ್ಲಿ ಬೆಳೆದ ಸಿಹಿ ಗೋವಿನ ಜೋಳ ಬೆಳೆಯನ್ನು, ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ., ‘ಜಿಲ್ಲೆಯಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದು, ಈ ಸಿಹಿ ಗೋವಿನ ಜೋಳ ಬೆಳೆ ವಿಶೇಷವಾಗಿದೆ. ಸಾಮಾನ್ಯ ಬೆಳೆಯುವ ಗೋವಿನ ಜೋಳಕ್ಕಿಂತ ಭಿನ್ನವಾಗಿರುವ ಈ ಬೆಳೆ, 80ರಿಂದ 85 ದಿನಕ್ಕೆ ಕಟಾವಿಗೆ ಬರುತ್ತದೆ. ಖರ್ಚು ಸಹ ಕಡಿಮೆ ಇರುತ್ತದೆ. ರೈತರಿಗೆ ಆದಾಯವನ್ನು ಸಹ ತರುತ್ತದೆ’ ಎಂದರು.
‘ಜೋಳದ ಕಾಳುಗಳು ಮೃದುವಾಗಿದ್ದು, ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದೆ. ತರಕಾರಿ ಬೆಳೆಯಾಗಿಯೂ ಉಪಯೋಗಿಸಲಾಗುತ್ತದೆ. 100 ಗ್ರಾಂ ಸಿಹಿ ಮುಸುಕಿನ ಜೋಳದಲ್ಲಿ ಶೇ 14ರಷ್ಟು ಸಕ್ಕರೆ ಅಂಶ, ಶೇ 2ರಷ್ಟು ನಾರಿನಂಶ, ಶೇ 20 ಕ್ಯಾಲ್ಸಿಯಂ ಮತ್ತು ಶೇ 0.52 ಕಬ್ಬಿಣದ ಅಂಶವನ್ನು ಹೊಂದಿದೆ. ಫಲವತ್ತಾದ ಹೆಚ್ಚಿನ ತೇವಾಂಶವಿರುವ ಮಣ್ಣಿನಲ್ಲಿ ಉತ್ತಮ ಇಳುವರಿ ಕೊಡುತ್ತದೆ’ ಎಂದು ಹೇಳಿದರು.
‘ಈ ಬೆಳೆಯನ್ನು ವರ್ಷದಲ್ಲಿ 3ರಿಂದ 4 ಸಲ ಬೆಳೆಬಹುದು. ಇದರ ಹಸಿರು ಮೇವು ಹೆಚ್ಚು ರಸವತ್ತಾಗಿದ್ದು, ಹಾಲು ಕೊಡುವ ರಾಸುಗಳಿಗೆ ಉತ್ತಮ ಮೇವಾಗುತ್ತದೆ. ಬೆಳೆಗೆ ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಅರಿತು, ಒಪ್ಪಂದದ ಆಧಾರದ ಮೇಲೆ ಬೆಳೆದಲ್ಲಿ ರೈತರಿಗೆ ಹೆಚ್ಚಿನ ಆದಾಯ ಬರುತ್ತದೆ’ ಎಂದರು.
ರೈತ ಪರಮೇಶ್ವರಪ್ಪ ಮಠದ ಮಾತನಾಡಿ, ‘ಬೆಂಗಳೂರಿನ ರಿಲಿಯನ್ಸ್ ಮಾರುಕಟ್ಟೆಯೊಂದಿಗೆ ಒಪ್ಪಂದ ಮಾಡಿಕೊಂಡು ಸಿಹಿ ಗೋವಿನ ಜೋಳ ಬೆಳೆಯುತ್ತಿದ್ದೇನೆ. ಬೆಳೆ ಕಟಾವಿಗೆ ಬಂದಿದ್ದು, ಖರ್ಚನ್ನು ಹೊರತುಪಡಿಸಿ ಪ್ರತಿ ಎಕರೆಯಲ್ಲಿ ₹65 ಸಾವಿರವರೆಗೆ ಲಾಭ ನಿರೀಕ್ಷಿಸಲಾಗಿದೆ’ ಎಂದು ಹೇಳಿದರು.
ಬೇಸಾಯಶಾಸ್ತ್ರ ವಿಜ್ಞಾನಿ ಡಾ. ಶಿವಮೂರ್ತಿ ಡಿ. ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.