ಹಾವೇರಿ: ‘ರೈತ ಕುಟುಂಬದಿಂದ ಬಂದಿರುವ ನನಗೆ ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳ ಅರಿವಿದೆ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸುವುದು ಸೇರಿದಂತೆ ರೈತ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ’ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ನಮ್ಮನ್ನಾಳುವ ಸರ್ಕಾರಗಳು ರೈತರ ಪರವಾಗಿರಬೇಕು ಎಂಬ ನಿಲುವು ನನ್ನದು. ರೈತರ ಮತ್ತು ರೈತ ಸಂಘಟನೆಗಳ ಹೋರಾಟವನ್ನು ಬೆಂಬಲಿಸುವೆ. ರೈತರ ಅನುಕೂಲಕ್ಕೆ ಆರಂಭವಾಗಿರುವ ಎಪಿಎಂಸಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಯತ್ನಿಸುವೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ಕ್ರಿಮಿನಾಶಕಗಳು ಕೈಗೆಟುಕುವ ಬೆಲೆಯಲ್ಲಿ ಸಿಗಬೇಕು. ಈ ನಿಟ್ಟಿನಲ್ಲಿ ನನ್ನ ಬದ್ಧತೆ ರೈತರ ಜೊತೆಗೆ ಇರುತ್ತದೆ’ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ಮುಂಗಾರು ಬಿತ್ತನೆ ಆರಂಭವಾಗಿದೆ. ರೈತರಿಗೆ ಬೆಳೆ ವಿಮೆ ಪಾವತಿಸುವುದು ಸೇರಿದಂತೆ ಕೃಷಿ ಕ್ಷೇತ್ರದ ಸಂಕಷ್ಟಗಳ ಪರಿಹಾರ ಹೋರಾಟದಲ್ಲಿ ಶಾಸಕ ರುದ್ರಪ್ಪ ಲಮಾಣಿ ಜೊತೆಗಿರಬೇಕು ಎಂದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಜು ತರ್ಲಘಟ್ಟ, ಉಪಾಧ್ಯಕ್ಷ ಶೇಖಪ್ಪ ಹಲಸೂರು, ಮುಖಂಡರಾದ ಮಲ್ಲಪ್ಪ ಬೆಂಚಳ್ಳಿ, ಪುಟ್ಟಪ್ಪ ಓಂಕಾರಣ್ಣನವರ, ಹನುಮಂತಪ್ಪ ತಳವಾರ, ಪುಟ್ಟಪ್ಪ ಹೊಸಳ್ಳಿ, ಕೋಟೆಪ್ಪ ಅಳಲಗೇರಿ, ಮಹೇಶ ಹೊಗೆಸೊಪ್ಪಿನವರ, ಚನ್ನಪ್ಪ ಮರಡೂರ, ಮುತ್ತಣ್ಣ ಗುಡಗೇರಿ, ಸರಸ್ವತೆವ್ವ ಉಳ್ಳಾಗಡ್ಡಿ, ನಿರ್ಮಲಾ ಭಂಡಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.