
ಬ್ಯಾಡಗಿ: ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಯೋಜನೆ ಅಡಿ 8ನೇ ಸುತ್ತಿನ ಕಾಲುಬಾಯಿ ಜ್ವರ ಕಾಯಿಲೆ ನಿಯಂತ್ರಣಕ್ಕೆ ಲಸಿಕಾ ಅಭಿಯಾನ ಆರಂಭಗೊಂಡಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ನೀಲಕಂಠ ಅಂಗಡಿ ಮಾತನಾಡಿದರು.
ಲಸಿಕಾ ಕಾರ್ಯಕ್ರಮ ಡಿ.2 ರವರೆಗೆ ರಾಜ್ಯದಾದ್ಯಂತ ನಿರಂತರವಾಗಿ ನಡೆಯಲಿದೆ. ತಾಲ್ಲೂಕಿನ 29,745 ದನ ಮತ್ತು ಎಮ್ಮೆಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಪ್ರತಿ ದಿನ ವಿವಿಧ ಗ್ರಾಮಗಳು ಮತ್ತು ನಗರ ವ್ಯಾಪ್ತಿಯಲ್ಲಿ ಜಾನುವಾರುಗಳಿರುವ ಮನೆಗಳಿಗೆ ತೆರಳಿ ಲಸಿಕೆ ಹಾಕಲು ಒಟ್ಟಾರೆ 17 ತಂಡಗಳನ್ನು ರಚಿಸಲಾಗಿದೆ. ಸೋಮವಾರ ಸಂಜೆ ಮಾಹಿತಿಯಂತೆ 1,157 ದನಗಳು ಹಾಗೂ 334 ಎಮ್ಮೆಗಳು ಸೇರಿದಂತೆ ಒಟ್ಟು 1,491 ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕಲಾಯಿತು.
ಬಡಮಲ್ಲಿ ಗ್ರಾಮದ 14 ದನಗಳು ಮತ್ತು 2 ಎಮ್ಮೆಗಳ ಸೀರಮ್ ಮಾದರಿಯನ್ನು ಸಂಗ್ರಹಿಸಿ ದಾವಣಗೆರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಮುಂದಿನ ಕ್ರಮ ಕೈಕೊಳ್ಳಲಾಗುವುದು. ಕಾರಣ ಗ್ರಾಮಸ್ಥರು ತಮ್ಮ ಮನೆಗೆ ಲಸಿಕೆದಾರರು ಬಂದಾಗ ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಂಡು ಕಾಲುಬಾಯಿ ಬೇನೆ ರೋಗದಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿಕೊಂಡರು.
ಡಾ.ನಿಜಾಮುದ್ದೀನ್, ಡಾ.ಉಮೇಶ ಹೊನ್ನತ್ತಿ, ಡಾ.ರಮೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.