
ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಬುಧವಾರ ಸಂತ ಶಿರೋಮಣಿ ಸೋಪಾನ ಕಾಕಾ ಮಹಾರಾಜರ ಪುಣ್ಯಸ್ಮರಣೆ ಅಂಗವಾಗಿ ನಡೆದ ವಾರ್ಷಿಕ ದಿಂಡಿ ಉತ್ಸವ ಕಾರ್ಯಕ್ರಮದ ಮುನ್ನ ಪಲ್ಲಕ್ಕಿ ಮಹೋತ್ಸವ ಭಕ್ತ ಸಮೂಹದ ನಡುವೆ ಜರುಗಿತು.
ಪಟ್ಟಣದ ವಿಠ್ಠಲ ರುಕ್ಮಿಣಿ ದೇವಸ್ಥಾನದ ಆವರಣದಿಂದ ಆರಂಭವಾದ ಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಭಜನೆ ಸೇರಿದಂತೆ ವಿವಿಧ ವಾದ್ಯವೈಭವದೊಂದಿಗೆ ಸಾಗಿ ಬಂದಿತು. ಭಕ್ತರ ಪಾಂಡುರಂಗ ವಿಠ್ಠಲ್ ಜಯಘೋಷಣೆ ಹಾಕುವ ಮೂಲಕ ಜರುಗಿತು.
ಪಲ್ಲಕ್ಕಿ ಮಹೋತ್ಸವದ ಸ್ವಾಗತಕ್ಕಾಗಿ ಪಟ್ಟಣದ ರಸ್ತೆಗಳನ್ನು ಅಲಂಕರಿಸಲಾಗಿತ್ತು. ಬಾಳೆ, ತೆಂಗು ಹಾಗೂ ಮಾವಿನ ತಳಿರು ತೋರಣಗಳಿಂದ ಶೃಂಗರಿಸಲಾಗಿತು. ಮನೆಗಳ ಮುಂದೆ ರಂಗೋಲಿ ಹಾಕಲಾಗಿತು. ಪಲ್ಲಕ್ಕಿ ಮಹೋತ್ಸವಕ್ಕೆ ಮಹಿಳೆಯರು, ಮಕ್ಕಳು ಹೂಹಣ್ಣು, ಹಾರಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಂಢರಪುರ ಪ್ರಭಾಕರ ಬುವಾ ಭಜರಂಗ ಬುವಾ ಬೋಧಲೆ ಮಹಾರಾಜರು ನೇತೃತ್ವ ವಹಿಸಿದ್ದರು. ಜಯವಂತ ಮಹಾರಾಜ ಬೋಧಲೆ, ಯಶವಂತ ಮಹಾರಾಜ ಬೋಧಲೆ ಮಾರ್ಗದರ್ಶನ ನೀಡಲಿದ್ದಾರೆ. ದಾನಿಗಳಾದ ಮಸಳೆ ಪಾಂಡುರಂಗರಾವ್, ರಮೇಶ ನಾರಾಯಣರಾವ್ ಸುಲಾಖೆ, ಮಲಕಾಜಪ್ಪ ರಾಂಪುರೆ, ಶಿವರುದ್ರಪ್ಪ ಮಾಮ್ಲೇಪಟ್ಟಣಶೆಟ್ಟರ, ರಾಮಕೃಷ್ಣ ಆಲದಕಟ್ಟಿ, ನೀಲವ್ವ ಆಲದಕಟ್ಟಿ, ದರ್ಶನ ಕುಂಠೆ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.