ಹಾವೇರಿ: ಜಿಲ್ಲಾ ಮತ್ತು ತಾಲ್ಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿಗಳ ಆಶ್ರಯದಲ್ಲಿ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪಾರ್ಶ್ವ ಸೂರ್ಯಗ್ರಹಣ ವೀಕ್ಷಣೆಯನ್ನು ಮಾಡಲಾಯಿತು.
ಮುಂಗಾರು ಮೋಡಗಳ ನಡುವೆ ಅವಿತುಕೊಂಡಿದ್ದ ಸೂರ್ಯನಿಗಾಗಿ ಬೆಳಿಗ್ಗೆ 10.30ರಿಂದ ಕಾಯ್ದಿದ್ದ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯರು ಸುಸ್ತಾದಾಗ ಕೊನೆಗೂ 12ಕ್ಕೆ ಸೂರ್ಯ ದರ್ಶನ ಕೊಟ್ಟ. ಹರ್ಷದಿಂದ ನಿಟ್ಟುಸಿರು ಬಿಟ್ಟು ಸೂರ್ಯಗ್ರಹಣವನ್ನು ವೀಕ್ಷಿಸಿ ಆನಂದಿಸಿದರು.
ಡಿಸೆಂಬರ್ ತಿಂಗಳಲ್ಲಿ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಿದ್ದ ಸದಸ್ಯರು ಈ ಬಾರಿ ಕೊರೊನಾ ಜಾಗೃತಿಯೊಂದಿಗೆ ಹತ್ತಾರು ಸುರಕ್ಷಿತ ಸಾಧನಗಳನ್ನು ಬಳಸಿ, ಗ್ರಹಣವನ್ನು ನೋಡಿದರು. ಒಡೆದ ಹಸಿ ತತ್ತಿಯಂತೆ ಕಪ್ಪು ಬಿಳುಪಿನ ಮಧ್ಯೆ ಕಾಣುತ್ತಿದ್ದ ಸೂರ್ಯ ಮಂಕಾಗಿದ್ದಾನೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಮಾಲತೇಶ ಕರ್ಜಗಿ ಹೇಳಿದರು.
‘ಒಂದು ಆಕಾಶ ಕಾಯ ಮತ್ತೊಂದು ಆಕಾಶ ಕಾಯವನ್ನು ತಾತ್ಕಾಲಿಕವಾಗಿ ಮರೆ ಮಾಡುವ ಆಕಾಶ ವಿಸ್ಮಯವೇ ಗ್ರಹಣ. ಮೌಢ್ಯಕ್ಕೆ ಬಲಿಯಾಗದೆ ಪ್ರಕೃತಿ ವಿಸ್ಮಯವನ್ನು ನೋಡಿ ಆನಂದಿಸಬೇಕು’ ಎಂದು ಕಾರ್ಯದರ್ಶಿ ಆರ್.ಸಿ.ನಂದಿಹಳ್ಳಿ ಹೇಳಿದರು.
ವೈಜ್ಞಾನಿಕವಾಗಿ ಸಿದ್ಧಪಡಿಸಿದ್ಧ ಹತ್ತಾರು ಕನ್ನಡಕಗಳ ಮೂಲಕ ಮೈದಾನಕ್ಕೆ ಬಂದ ಮೂವತ್ತಕ್ಕೂ ಹೆಚ್ಚು ಕ್ರೀಡಾಪಟುಗಳು ಸೂರ್ಯಗ್ರಹಣ ನೋಡಿ ಆನಂದಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಗುಡಿಮನಿ,ಸರ್ವಶ್ರೀ ಸುರೇಶ ದೊಡ್ಡಮನಿ, ಎ.ಬಿ. ಗುಡ್ಡಳ್ಳಿ, ಮಂಜುನಾಥ ವಾಲ್ಮೀಕಿ, ಮಹಾಂತೇಶ ಮರಿಗೂಳಪ್ಪನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.