ಶಿಗ್ಗಾವಿ: ಬಂಕಾಪುರ ತಾಲ್ಲೂಕು ಆಗಲು ಎಲ್ಲ ಅರ್ಹತೆಗಳಿದ್ದು, ಶಾಸಕರ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರತಿಯೊಬ್ಬರ ಸಹಕಾರ ಅವಶ್ಯವಾಗಿದೆ ಎಂದು ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಕೆ.ಆದವಾನಿಮಠ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶುಕ್ರವಾರ ನಡೆದ ಬಂಕಾಪುರ ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು.
1961ರವರೆಗೆ ತಾಲ್ಲೂಕು ಕೇಂದ್ರವಾಗಿದ್ದ ಬಂಕಾಪುರ ಪಟ್ಟಣವನ್ನು ಮತ್ತೆ ತಾಲ್ಲೂಕು ಮಾಡಬೇಕಾಗಿದೆ. ಹೊಸ ತಾಲ್ಲೂಕು ಅಲ್ಲ, ಇದ್ದ ತಾಲ್ಲೂಕನ್ನು ಮರಳಿ ನೀಡಿರಿ ಎಂದು ಸರ್ಕಾರ ಮಟ್ಟದಲ್ಲಿ ಒತ್ತಾಯಿಸುವುದು ಮುಖ್ಯವಾಗಿದೆ. ಹೀಗಾಗಿ ಬಂಕಾಪುರ ಹೋಬಳಿ ಮಟ್ಟದ ಪ್ರತಿ ಗ್ರಾಮಗಳ ಜನರು ಪಕ್ಷಾತೀತ ಬೆಂಬಲ ವ್ಯಕ್ತಪಡಿಸುವುದು ಅವಶ್ಯವಾಗಿದೆ. ಅದರಿಂದಾಗಿ ನಮ್ಮ ಬೇಡಿಕೆ ಈಡೇರಲು ಸಾಧ್ಯವಿದೆ ಎಂದರು.
ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಅವರು ಬರುವ ವಿಧಾನ ಸಭೆ ಅಧಿವೇಶನದಲ್ಲಿ ಚರ್ಚಿಸಬೇಕು. ಅಧಿವೇಶನ ನಡೆದ ಸಂದರ್ಭದಲ್ಲಿ ಬಂಕಾಪುರ ಹೋರಾಟ ಸಮಿತಿ ಸದಸ್ಯರು, ಬಂಕಾಪುರ ಮುಖಂಡರು, ಪುರಸಭೆ ಸದಸ್ಯರು ಬಂದು ಮುಖ್ಯಮಂತ್ರಿ ಅವರಿಗೆ ತಮ್ಮ ಸಮ್ಮುಖದಲ್ಲಿ ಮನವಿ ನೀಡಲಾಗುವುದು. ಅದಕ್ಕೆ ಶಾಸಕರು ಅವಕಾಶ ಕಲ್ಪಿಸಬೇಕು ಎಂದರು.
ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಂಸ್ಥಾಪಕ ಸಂಚಾಲಕ ಅಬ್ದುಲರಜಾಕ ತಹಶೀಲ್ದಾರ, ಮಂಜುನಾಥ ಕೂಲಿ, ರಾಮಕೃಷ್ಣ ಆಲದಕಟ್ಟಿ , ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಉಪಾಧ್ಯಕ್ಷ ಆಂಜನೇಯ ಗುಡಿಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಯೂಬಖಾನ್ ಪಠಾಣ ಸೇರಿದಂತೆ ಪುರಸಭೆ ಸದಸ್ಯರು, ಬಂಕಾಪುರ ಪಟ್ಟಣದ ಸಾರ್ವಜನಿಕರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸುತ್ತಲಿನ ಗ್ರಾಮಗಳ ಜನ ಸಭೆಯಲ್ಲಿ ಇದ್ದರು.
ಮನವಿ ಸ್ವೀಕರಿಸಿದ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಮಾತನಾಡಿ, ‘ಬಂಕಾಪುರ ಪಟ್ಟಣವು ತಾಲ್ಲೂಕು ಕೇಂದ್ರವಾಗಲು ಸೂಕ್ತವಾಗಿದೆ. ಇದರ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸುವೆ. ಮುಖ್ಯಮಂತ್ರಿ ಹಾಗೂ ವಿವಿಧ ಸಚಿವರಿಗೆ ಮನವಿ ಸಲ್ಲಿಸೋಣ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.