ADVERTISEMENT

ಗಂಗಿಬಾವಿಮಠದ ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ತಡೆ

ಪೊಲೀಸ್‌ ರಕ್ಷಣೆ ನೀಡಲು ರಾಜಗುರು ಶಿವಯೋಗಿ ಸಿದ್ಧಲಿಂಗ ಸ್ವಾಮೀಜಿ ಮನವಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 14:10 IST
Last Updated 20 ಸೆಪ್ಟೆಂಬರ್ 2020, 14:10 IST
ಶಿಗ್ಗಾವಿ ತಾಲ್ಲೂಕಿನ ಗಂಗಿಬಾವಿ ಮಠದ ಹೊರನೋಟ
ಶಿಗ್ಗಾವಿ ತಾಲ್ಲೂಕಿನ ಗಂಗಿಬಾವಿ ಮಠದ ಹೊರನೋಟ   

ಶಿಗ್ಗಾವಿ: ತಾಲ್ಲೂಕಿನ ಗಂಗಿಬಾವಿಮಠದ ಆಡಳಿತದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ. ಅಕ್ರಮವಾಗಿ ಪ್ರವೇಶಿಸುವಂತಿಲ್ಲ. ಮಠದ ಆಸ್ತಿಯಲ್ಲಿ ಯಾರೂ ಕಾನೂನುಬಾಹಿರ ಚಟುವಟಿಕೆ ಮಾಡಬಾರದು ಎಂದು ಶಿಗ್ಗಾವಿ ಸಿವಿಲ್ ನ್ಯಾಯಾಲಯ ಇತ್ತೀಚೆಗೆ ಪ್ರತಿಬಂಧಕಾಜ್ಞೆ ಹೊರಡಿಸಿದೆ.

ಮಠದ ಆಸ್ತಿ ಮೇಲೆ ಸಿದ್ಧಲಿಂಗಸ್ವಾಮಿ ಪಿ.ಗಾಳಿಮಠ ಉರುಫ್‌ ರಾಜಗುರು ಶಿವಯೋಗಿ ಸಿದ್ಧಲಿಂಗ ಸ್ವಾಮೀಜಿಗೆ ಇರುವ ಶಾಂತಿಯುತ ಸ್ವಾಧೀನತೆಗೆ ಮತ್ತು ಮಠದದಲ್ಲಿ ನಡೆಯುವ ವಿಧಿ ವಿಧಾನಗಳಿಗೆ ಯಾರೂ ಅಡ್ಡಿ ಉಂಟು ಮಾಡಬಾರದು ಎಂದು ಹೊಸೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೇರಿದಂತೆ 32 ಮಂದಿ ಪ್ರತಿವಾದಿಗಳಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಠದ ಆಸ್ತಿಯಲ್ಲಿ ಫಲಕ ಹಾಕುವುದು. ಅಕ್ರಮವಾಗಿ ಗಣಿಗಾರಿಕೆಯಂಥಹ ಚಟುವಟಿಕೆಗಳನ್ನು ಮಾಡುವಂತಿಲ್ಲ ಎಂದು ಶಿಗ್ಗಾವಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀದೇವಿ ದರಬಾರ ಅವರು 2020 ಆ.24ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. ಸ್ವಾಮೀಜಿ ಪರವಾಗಿ ವಕೀಲ ಎಫ್.ಎಸ್.ಕೋಣಿನವರ ವಾದ ಮಂಡಿಸಿದ್ದರು.

ADVERTISEMENT

ರಕ್ಷಣೆಗೆ ಮೊರೆ:‘ಮಠದ ಮೂಲ ಗುರುಗಳಾದ ರಾಜಗುರು ಬ್ರಹ್ಮಾನಂದೇಶ ಯೋಗಿರಾಜೇಂದ್ರ ಸ್ವಾಮೀಜಿ ಅವರು 2011ರ ಮೇ 11ರಂದು ನನ್ನನ್ನು ‘ಉತ್ತರಾಧಿಕಾರಿ’ ಎಂದು ನೋಂದಣಿ ಮಾಡಿದ್ದಾರೆ. ಹೀಗಾಗಿ ಮಠದ ಆಸ್ತಿ ಸಂಪೂರ್ಣ ನನ್ನ ಹೆಸರಿನಲ್ಲಿದ್ದು, ಹೈಕೋರ್ಟ್‌ ಆದೇಶದಂತೆ ಹಸ್ತಾಂತರವಾಗಿದೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ಮಠದ ಆಡಳಿತ ಸುವ್ಯವಸ್ಥೆಯಿಂದ ನಡೆಸಿಕೊಂಡು ಹೋಗುತ್ತೇನೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿವೆ. ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸುವ ಉದ್ದೇಶ ಹೊಂದಿದ್ದಾರೆ. ಹಾಗಾಗಿ ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು’ ಎಂದು ಗಂಗಿಭಾವಿಮಠದ ರಾಜಗುರು ಶಿವಯೋಗಿ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.