ಹಾವೇರಿ: ‘ಅಂತರಂಗ ಹಾಗೂ ಬಹಿರಂಗ ಶುದ್ಧಿಎಂದರೆ ನಡೆ-ನುಡಿಗಳು ಒಂದಾಗಿರಲಿ ಎಂದರ್ಥ. ಅಸಮಾನತೆ ತೊಲಗಿ ಎಲ್ಲರೂ ಸಮಾನ ನೆಲೆಯಲ್ಲಿ ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂಬುದು ವಿಶ್ವಗುರು ಬಸವಣ್ಣನವರ ಆಶಯವಾಗಿತ್ತು’ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸಂಚಾಲಕ ಉಡಚಪ್ಪ ಮಾಳಗಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣವರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಟ ಅರ್ಪಿಸಿ ಅವರು ಮಾತನಾಡಿದರು.
‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ’ ಎಂದ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದ ಓರೆಕೋರೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಸಾಮಾಜಿಕ ಬದಲಾವಣೆಯ ಹಾದಿಯಲ್ಲಿ ಬಸವಣ್ಣನಿಗೆ ಎಂದೂ ಜಾತಿ, ಸ್ಥಾನಮಾನ ಮುಖ್ಯವಾಗಲಿಲ್ಲ. ಇಲ್ಲಿ ಸಲ್ಲುವುದನ್ನು ಕಲಿಯಬೇಕು ಎನ್ನುವ ಜೀವನ ಸಂದೇಶ ನೀಡಿದರು’ ಎಂದರು.
ನಿವೃತ್ತ ಶಿಕ್ಷಕ ಮಾಲತೇಶ ಕರ್ಜಗಿ ಮಾತನಾಡಿದರು.ಲಾಕ್ಡೌನ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಗುಡುಸಲಗೇರಿಯ ಬಡ ಕುಂಟುಂಬಗಳಿಗೆ ಬಸವ ಜಯಂತಿಯ ಅಂಗವಾಗಿ 2 ಕ್ವಿಂಟಲ್ ಅಕ್ಕಿಯನ್ನು ಡಿಎಸ್ಎಸ್, ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದಿಂದ ವಿತರಿಸಲಾಯಿತು.
ನಗರಸಭಾ ಸದಸ್ಯ ಪೀರಸಾಬ, ನಾಗೇಶ ಯಲ್ಲಪ್ಪ ಮಾಳಗಿ, ಲಿಂಗರಾಜ ದಂಡೆಮ್ಮನವರ, ಪ್ರಕಾಶ ಮಾಳಗಿ ವಕೀಲರು, ಮಹಾಂತೇಶ ದೇವಿಹೊಸೂರ, ಮಲ್ಲಪ್ಪ ಕಡಕೋಳ, ನೀಲೇಶ ದೇವಸೂರು, ಚಂದ್ರು ಬಿದರಿ, ಹೊನ್ನಪ್ಪ ಮಾಳಗಿ, ರಂಗಪ್ಪ ಹೆರಕಲ್ಲ, ರಘು ಮಾಳಗಿ ಮತ್ತಿತರರು ಅಕ್ಕಿ ವಿತರಿಸಿ ಮಾನವೀಯತೆ ಮೆರೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.