ADVERTISEMENT

ಡಿಕೆಶಿಗೆ ಸಿ.ಎಂ. ಉದಾಸಿ ವಿಲ್‌ ಬರೆದುಕೊಟ್ಟಿದ್ದಾರಾ? ಬಿ.ಸಿ ಪಾಟೀಲ ಪ್ರಶ್ನೆ

ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 14:37 IST
Last Updated 20 ಅಕ್ಟೋಬರ್ 2021, 14:37 IST
ಬಿ.ಸಿ.ಪಾಟೀಲ, ಕೃಷಿ ಸಚಿವ 
ಬಿ.ಸಿ.ಪಾಟೀಲ, ಕೃಷಿ ಸಚಿವ    

ಹಾವೇರಿ: ‘ಮಂತ್ರಿ ಸ್ಥಾನ ಸಿಗದ ಕಾರಣಕ್ಕೆ ಕೊನೆಯುಸಿರೆಳೆದೆ’ ಎಂದು ಸಿ.ಎಂ. ಉದಾಸಿ ಅವರು ಡಿ.ಕೆ.ಶಿವಕುಮಾರ್‌ ಅವರಿಗೆ ಏನಾದರೂ ವಿಲ್‌ ಬರೆದುಕೊಟ್ಟಿದ್ದಾರಾ?. ಕಾಂಗ್ರೆಸ್‌ನವರಿಗೆ ಸೋಲಿನ ಭಯ ಕಾಡುತ್ತಿರುವುದರಿಂದ ಇಂಥ ಅಪ್ರಬುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿರುಗೇಟು ನೀಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜೆಡಿಎಸ್‌ನವರು ಮತ ತೆಗೆದುಕೊಂಡರೆ ಕಾಂಗ್ರೆಸ್‌ ಸೋಲುತ್ತದೆ ಎನ್ನುತ್ತಾರೆ ಸಿದ್ದರಾಮಯ್ಯ. ಈ ರೀತಿ ಮಾತನಾಡೋಕೆ ಇವರು ಯಾರು? ಜೆಡಿಎಸ್‌ನವರು ಗೆಲ್ಲುವುದಕ್ಕಾಗಿ ಅಭ್ಯರ್ಥಿಯನ್ನು ಹಾಕಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪೊಲೀಸರು ಶಾಲು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ,ಕಾಂಗ್ರೆಸ್‌ನವರಿಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯವೋ ಗೊತ್ತಿಲ್ಲ. ರಾಷ್ಟ್ರಧ್ವಜದಲ್ಲೂ ಕೇಸರಿ ಬಣ್ಣವಿದೆ. ಮುಸ್ಲಿಂ ಕಾನ್‌ಸ್ಟೆಬಲ್‌ ನಮಾಜು ಮಾಡಲು ಹೋಗಬೇಕು ಎಂದರೆ ಅವರ ಡ್ರೆಸ್‌ಕೋಡ್‌ನಲ್ಲೇ ಹೋಗುತ್ತಾರೆ. ಸಿ.ಎಂ ಆದರೆ ಮುಸ್ಲಿಮರಿಗೆ ಇಷ್ಟು ಕೋಟಿ ಕೊಡ್ತೀವಿ ಎನ್ನುವ ಸಿದ್ದರಾಮಯ್ಯನವರೇ ಹಿಂದೂಗಳಿಗೆ ಎಷ್ಟು ದುಡ್ಡು ಕೊಡ್ತೀರಿ ಹೇಳಿ ಎಂದು ಸವಾಲು ಹಾಕಿದರು.

ADVERTISEMENT

ನಳೀನ್‌ಕುಮಾರ್‌ ಕಟೀಲ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗೋಕೆ ಯೋಗ್ಯರಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಯೋಗ್ಯತೆ ಇರದಿದ್ದರೆ ಕಟೀಲ್ ಅಧ್ಯಕ್ಷರಾಗ್ತಿರಲಿಲ್ಲ.ಕಾಂಗ್ರೆಸ್‌ಗೆ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಶಕ್ತಿ ಇಲ್ಲ.ಸ್ವಂತ ಮಗನಿಗೆ ಅಧಿಕಾರ ಬಿಟ್ಟು ಕೊಡಲು ತಾಯಿ ಸಿದ್ಧರಿಲ್ಲ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.