ADVERTISEMENT

ಬೇಡ್ತಿ–ವರದಾ ನದಿ ಜೋಡಣೆಗಾಗಿ ಶೀಘ್ರವೇ ಜನಜಾಗೃತಿ ಸಮಾವೇಶ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:28 IST
Last Updated 12 ಜನವರಿ 2026, 6:28 IST
<div class="paragraphs"><p>ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಕೈಬಿಡಲು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಘನಾಶಿನಿ, ಬೇಡ್ತಿ ಕೊಳ್ಳದ ವಿವಿಧ ಗ್ರಾಮಗಳ ಜನರು ಇತ್ತೀಚೆಗೆ ಪಾದಯಾತ್ರೆ ನಡೆಸಿದರು.</p></div>

ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಕೈಬಿಡಲು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಘನಾಶಿನಿ, ಬೇಡ್ತಿ ಕೊಳ್ಳದ ವಿವಿಧ ಗ್ರಾಮಗಳ ಜನರು ಇತ್ತೀಚೆಗೆ ಪಾದಯಾತ್ರೆ ನಡೆಸಿದರು.

   

ಹಾವೇರಿ: ‘ಹಾವೇರಿ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕೆ ಬೇಡ್ತಿ–ವರದಾ ನದಿ ಜೋಡಣೆ ಅತೀ ಅವಶ್ಯಕವಾಗಿದೆ. ಅರಣ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆ ಜಾರಿಗೆ ಡಿಪಿಆರ್‌ ಮಾಡಲಾಗುತ್ತಿದೆ. ಜಿಲ್ಲೆಗೆ ಯೋಜನೆಯಿಂದಾಗುವ ಪ್ರಯೋಜನಗಳ ಬಗ್ಗೆ ಚರ್ಚಿಸಲು ಹಾಗೂ ಹೋರಾಟವನ್ನು ರೂಪಿಸುವ ಸಲುವಾಗಿ ಶೀಘ್ರದಲ್ಲೇ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಯೋಜನೆಗೆ ವಿರೋಧ ವ್ಯಕ್ತಪಡಿಸಿ ಶಿರಸಿಯಲ್ಲಿ ಭಾನುವಾರ ನಡೆದ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಈ ಯೋಜನೆಯನ್ನು ಯಾರೂ ಭಾವನಾತ್ಮಕವಾಗಿ ತೆಗೆದುಕೊಳ್ಳಬಾರದು. ವಸ್ತುಸ್ಥಿತಿ ಅರಿತು ಒಬ್ಬರಿಗೊಬ್ಬರು ಸಹಕಾರ ನೀಡಬೇಕು. ಶಿರಸಿ–ಸಿದ್ದಾಪುರ ಹಾಗೂ ಹಾವೇರಿ ಜಿಲ್ಲೆಯ ಜನರ ನಡುವೆ ನಿಕಟವಾದ ಸಂಬಂಧವಿದೆ. ಇದಕ್ಕೆ ಯಾರೂ ಧಕ್ಕೆ ತರಬಾರದು. ಇದು ಜನರ ಕುಡಿಯುವ ನೀರಿಗೆ ಸಂಬಂಧಪಟ್ಟ ವಿಷಯ. ಜನರು ಸಹ ಡಿಪಿಆರ್‌ ಅಂತಿಮವಾಗುವವರೆಗೂ ಕಾಯಬೇಕು. ಆತುರದ ನಿರ್ಧಾರ ಕೈಗೊಂಡರೆ ಯಾರಿಗೂ ಲಾಭವಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಹಾವೇರಿ ಜಿಲ್ಲೆಯಲ್ಲಿರುವ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಮುಖಂಡರ ನೇತೃತ್ವದಲ್ಲಿ ಜನರನ್ನು ಜಾಗೃತಿಗೊಳಿಸಲು ಸಮಾವೇಶ ಮಾಡಲಾಗುವುದು. ಯೋಜನೆ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ಗೊಂದಲಗಳು ಸೃಷ್ಟಿಯಾಗಿದ್ದು, ಅವುಗಳ ನಿವಾರಣೆಗಾಗಿ ರಾಜ್ಯ ಸರ್ಕಾರವೇ ಸಭೆ ಕರೆಯಬೇಕು’ ಎಂದು ಅವರು ಒತ್ತಾಯಿಸಿದರು.

‘ವರದಾ–ಬೆಡ್ತಿ ನದಿ ಜೋಡಣೆ ಯೋಜನೆ ಇಂದಿನದಲ್ಲ. ಹೊಸದಾಗಿ ಏನೂ ಯೋಜನೆ ಮಾಡುತ್ತಿಲ್ಲ. ಅಂದಿನ ಯೋಜನೆಗೂ ಇಂದಿನ ಯೋಜನೆಗೂ ವ್ಯತ್ಯಾಸ ಇದೆ. ಈಗ ಪರಿಸರ ಹಾನಿ, ಅರಣ್ಯ ನಾಶ ಏನೂ ಆಗುವುದಿಲ್ಲ. ಬೇಡ್ತಿ ನದಿಯಿಂದ ಕಡಿಮೆ ನೀರು ಎತ್ತುವ ಉದ್ದೇಶವಿದೆ. ಯಾವುದೇ ನೀರಿನ ನಷ್ಟವೂ ಆಗುವುದಿಲ್ಲ’ ಎಂದರು.

‘ಕುಡಿಯುವ ನೀರು ಜನರ ಮೂಲಭೂತ ಹಕ್ಕು. ಅದನ್ನು ಪೂರೈಸುವುದು ಸರ್ಕಾರದ ಕರ್ತವ್ಯವೂ ಹೌದು. ಹಾವೇರಿ ಜಿಲ್ಲೆಯ ಹಾವೇರಿ, ಹಾನಗಲ್, ಬ್ಯಾಡಗಿ, ಶಿಗ್ಗಾವಿ ಹಾಗೂ ಸವಣೂರು ಜನರೂ ಇಂದಿಗೂ ಕುಡಿಯುವ ನೀರಿಗೆ ವರದಾ ನದಿ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಕೇವಲ 5 ತಿಂಗಳು ಮಾತ್ರ ವರದಾ ನದಿಯಲ್ಲಿ ನೀರು ಸಿಗುತ್ತಿದೆ. ಉಳಿದ ಸಮಯದಲ್ಲಿ ನೀರು ಬತ್ತುತ್ತಿದೆ. ಇದೇ ಕಾರಣಕ್ಕೆ ಬೇಡ್ತಿ ಮೂಲಕ ಸಮುದ್ರ ಸೇರುತ್ತಿರುವ ನೀರಿನಲ್ಲಿ ಕೇವಲ ಶೇ 8ರಷ್ಟು ನೀರನ್ನು ಮಾತ್ರ ವರದಾ ನದಿಗೆ ಹರಿಸಲು ಈ ಯೋಜನೆ ರೂಪಿಸಲಾಗಿದೆ.

‘ನೀರಾವರಿ ಯೋಜನೆಗಳ ಜಾರಿಯಲ್ಲಿ ಈಗ ಹೊಸ ತಂತ್ರಜ್ಞಾನಗಳು ಬಂದಿವೆ. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬಹುದು. ಇದನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.