ADVERTISEMENT

ಬರ, ಗಾಳಿಗೆ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡಲು ಆಗ್ರಹ

ಬಿಜೆಪಿ ಪ್ರತಿಭಟನೆ: ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಶಾಸಕ ಸಿ.ಎಂ. ಉದಾಸಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಮೇ 2019, 13:32 IST
Last Updated 6 ಮೇ 2019, 13:32 IST
ಬರ ಹಾಗೂ ಈಚೆಗೆ ಬೀಸಿದ ಗಾಳಿಗೆ ಬೆಳೆ ಹಾನಿಯಾದ ಹೊಲಗಳ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಬರ ಹಾಗೂ ಈಚೆಗೆ ಬೀಸಿದ ಗಾಳಿಗೆ ಬೆಳೆ ಹಾನಿಯಾದ ಹೊಲಗಳ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.   

ಹಾವೇರಿ:ಬರ ಹಾಗೂ ಈಚೆಗೆ ಬೀಸಿದ ಗಾಳಿಗೆ ಬೆಳೆ ಹಾನಿಯಾದ ಹೊಲಗಳ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿ.ಎಂ. ಉದಾಸಿ, ಈಚೆಗೆ ಬೀಸಿದ ಗಾಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೋಟಗಾರಿಕಾಬೆಳೆ ಹಾನಿಯಾಗಿದ್ದು, ಪರಿಹಾರ ನೀಡಬೇಕು. ಹೋರಾಟದ ಸಂದರ್ಭಗಳಲ್ಲಿ ರೈತರ ಮೇಲೆ ಹಾಕಲಾದ ಕೇಸುಗಳನ್ನು ರದ್ದು ಪಡಿಸಲು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಖಾತೆಗೆ ಶೀಘ್ರ ಪಾವತಿಸಬೇಕು ಆಗ್ರಹಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರವು ಮಾಧ್ಯಮ ಮತ್ತು ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರ್ಕಾರ ಹಾಗೂ ಮಂತ್ರಿಗಳನ್ನು ಟೀಕಿಸಿದರೆ, ಅಪರಾಧ ಎನ್ನುವಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಹಕ್ಕಿನ ರಕ್ಷಣೆ ಮಾಡುವ ಜವಾಬ್ದಾರಿಯುನ್ನು ಸರ್ಕಾರ ನಿಭಾಯಿಸಬೇಕು ಎಂದರು.

ADVERTISEMENT

ಜಿಲ್ಲೆಯಲ್ಲಿ ಕೆರೆಗಳು– ಕೊಳವೆಬಾವಿಗಳು ಬತ್ತಿ ಹೋಗುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರುತ್ತಿದೆ. ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬರದ ಪರಿಣಾಮ ಉದ್ಯೋಗ ಸೃಷ್ಟಿಗಾಗಿ ಕ್ರಮ ಕೈಗೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳು ಫಲಾನುಭವಿಗಳಿಗೆ ಶೀಘ್ರವೇ ದೊರೆಯುವಂತೆ ಮಾಡಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಯು.ಬಿ. ಬಣಕಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದರಾಜ ಕಲಕೋಟಿ ಮತ್ತಿತರರು ಆಗ್ರಹಿಸಿದರು.

ಡಾ. ಬಸರಾಜ ಕೇಲಗಾರ, ಮಂಜುನಾಥ ಓಲೇಕಾರ, ವಿರೂಪಾಕ್ಷಪ್ಪ ಕಡ್ಲಿ, ಶಿವರಾಜ ಹರಿಜನ, ನೀಲಪ್ಪ ಈಟೇರ, ಮಾರುತಿ ಗೊರವರ, ಭಾರತಿ ಮಲ್ಲಿಕಾರ್ಜುನ, ಅಭಿದಾಬಿ ನದಾಫ್, ಗದಗೆಮ್ಮ ದೇಸಾಯಿ, ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ನಿಂಗಪ್ಪ ಗೊಬ್ಬೇರ, ಚೋಳಪ್ಪ ಕಸವಾಳ, ಶಿವಾನಂದ ಮ್ಯಾಗೇರಿ, ನಂಜುಂಡೇಶ ಕಳ್ಳೇರ, ಎ.ಬಿ. ಪಾಟೀಲ, ಶಿವಯೋಗಿ ಹುಲಿಕಂತಿಮಠ, ಸತೀಶ ಸಂದಿಮನಿ, ಪರಮೇಶ್ವರ ಮೇಗಳಮನಿ, ಪ್ರಭು ಹಿಟ್ನಳ್ಳಿ, ಶಿವಲಿಂಗಪ್ಪ ತಲ್ಲೂರ, ಶಣ್ಮುಖ ಮಳ್ಳಿಮಠ, ಶಂಕರಣ್ಣ ಮಾತನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.