ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ರಕ್ಷಣೆಗೆ ಪಂಜಾಬ್ ಸರ್ಕಾರ ಉದ್ದೇಶಪೂರ್ವಕವಾಗಿ ಭಂಗ ತಂದಿದೆ ಎಂದು ಆರೋಪಿಸಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು ಶುಕ್ರವಾರ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರ ಪ್ರತಿಕೃತಿಯನ್ನು ದಹನ ಮಾಡುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ಪ್ರಧಾನಿಗೆ ಭದ್ರತಾ ಲೋಪದ ಘಟನೆ ಕಾಂಗ್ರೆಸ್ನ ಭಯೋತ್ಪಾದಕ ಮನೋಸ್ಥಿತಿಯನ್ನು ತೋರಿಸುತ್ತದೆ. ಈ ರಾಜಕೀಯ ದುರುದ್ದೇಶದ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಪ್ರಧಾನಿ ಮೋದಿ ಅವರ ಪ್ರಾಣಕ್ಕೆ ಸಂಚಕಾರ ತರುವಂತೆ ವರ್ತಿಸಿದ ಪಂಜಾಬ್ ಸರ್ಕಾವನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
ವಿಭಾಗಿಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಮುಳ್ಳೂರ, ಪಂಜಾಬನ ರಾಷ್ಟ್ರೀಯವಾದಿ ಜನರನ್ನು ದೇಶದ ಎದುರು ತೆಲೆತಗ್ಗಿಸುವಂತೆ ಮಾಡುವ ಹುನ್ನಾರದ ಕೆಲಸವನ್ನು ಪಂಜಾಬಿನ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ‘ಪಾಕಿಸ್ತಾನ ಗಡಿಯಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಫಿರೋಜ್ಪುರ ಸೇತುವೆ ಮೇಲೆ ಪ್ರಧಾನಿ ಮೋದಿ ಅವರನ್ನು ಸತತ 20 ನಿಮಿಷಗಳ ಕಾಲ ತಡೆಗಟ್ಟಿ, ಅವರ ಜೀವಕ್ಕೆ ಹಾನಿ ಮಾಡುವ ಕೃತ್ಯವನ್ನು ಪಂಜಾಬ್ನ ಕಾಂಗ್ರೆಸ್ ಸರ್ಕಾರ ಮಾಡಿದೆ. ಇದು ಅತ್ಯಂತ ಕೀಳು ಮಟ್ಟದ ರಾಜಕೀಯವಾಗಿದೆ ಎಂದು ಕಿಡಿಕಾರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪವನಕುಮಾರ ಮಲ್ಲಾಡದ,ಉಪಾಧ್ಯಕ್ಷ ರುದ್ರಗೌಡ ಪಾಟೀಲ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರತೀಕ ಕೋಳೆಕರ, ದಯಾನಂದ ಜಾದವ್, ಅಭಿಷೇಕ ಬ್ಯಾಡಗಿ, ಅಭಿಷೇಕ ಗುಡಗೂರ, ಪ್ರಶಾಂತ ಕೋಡಿತ್ಕರ, ಪ್ರಭು ಹಿಟ್ನಳ್ಳಿ, ಗಿರೀಶ ತುಪ್ಪದ, ಬಾಬುಸಾಬ ಮೋಮಿನಗಾರ, ವಿವೇಕಾನಂದ ಇಂಗಳಗಿ, ಲಲಿತಾ ಗುಂಡೇನಹಳ್ಳಿ, ಲಲಿತಾ ಭೀಮಕ್ಕನವರ, ಪುಷ್ಪಾ ಚಕ್ರಸಾಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.