ADVERTISEMENT

‘ಹಾನಗಲ್‌ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ’: ಬಿಜೆಪಿ ಬಿರುಸಿನ ಪ್ರಚಾರ

ಬಿಜೆಪಿ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 17:13 IST
Last Updated 20 ಅಕ್ಟೋಬರ್ 2021, 17:13 IST
ತಿಳವಳ್ಳಿ ಸಮೀಪದ ಬ್ಯಾತನಾಳ ಗ್ರಾಮದಲ್ಲಿ ಸಚಿವ ಸುನೀಲಕುಮಾರ ಕಾರ್ಕಳ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು
ತಿಳವಳ್ಳಿ ಸಮೀಪದ ಬ್ಯಾತನಾಳ ಗ್ರಾಮದಲ್ಲಿ ಸಚಿವ ಸುನೀಲಕುಮಾರ ಕಾರ್ಕಳ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು   

ತಿಳವಳ್ಳಿ: ಹಾನಗಲ್‌ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಉದಾಸಿಯವರು ಕೈಗೊಂಡ ಕೆರೆತುಂಬಿಸುವ ಕೆಲಸ ಮತ್ತು ರಸ್ತೆಗಳ ಸುಧಾರಣೆಗಳನ್ನು ಗಮನಿಸಿದರೆ ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದರಲ್ಲಿ ಎರಡು ಮಾತಿಲ್ಲ ಎಂದು ಸಚಿವ ಸುನೀಲಕುಮಾರ ಕಾರ್ಕಳ ಹೇಳಿದರು.

ತಿಳವಳ್ಳಿ ಸಮೀಪದ ಬ್ಯಾತನಾಳ ಗ್ರಾಮದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರವಾಗಿ ಪ್ರಚಾರ ನಡೆಸಿ ಮಾತನಾಡಿದರು.

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ₹ 6 ಸಾವಿರ ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ ₹ 4 ಸಾವಿರ ನೀಡಿದೆ. ವರ್ಷದಲ್ಲಿಒಟ್ಟು ₹ 10 ಸಾವಿರ ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗುತ್ತಿದೆ ಎಂದರು.

ADVERTISEMENT

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ, ಹಿರಿಯ ನಾಗರಿಕರಿಗೆ ನೀಡುವ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ₹ 200 ಹೆಚ್ಚಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.

ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಸರ್ಕಾರದ ಭಾಗ ಆಗಲ್ಲ. ಶಿವರಾಜ ಸಜ್ಜನರ ಗೆದ್ದರೆ ಸರ್ಕಾರದ ಭಾಗವಾಗಿ ಕೆಲಸಮಾಡುತ್ತಾರೆ. ನಮ್ಮ ಜಿಲ್ಲೆಯವರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿರುವುದರಿಂದ ಶಿವರಾಜ ಸಜ್ಜನರ ಗೆದ್ದರೆ ಹಾನಗಲ್‌ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.

ಚನ್ನಗಿರಿ ಶಾಸಕ ವಿರುಪಾಕ್ಷಪ್ಪ ಮಾಡಾಳ, ಶಿವಲಿಂಗಪ್ಪ ತಲ್ಲೂರ, ಮಾಲತೇಶ ಗಂಟೇರ, ಚಾಮರಾಜ ಹಕ್ಕಲಣ್ಣನವರ, ಚನ್ನಬಸಪ್ಪ ಕಿಚಡಿ, ಸುಭಾಸ್, ಲೋಕೇಶ ದೆಬ್ಬಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.