ಹಾವೇರಿ: ‘ಶಿಕ್ಷಣವು ಮನುಷ್ಯರಲ್ಲಿ ಪರಿಪೂರ್ಣತೆ ತರುತ್ತದೆ. ಹಣದಿಂದ ಬರುವ ಗೌರವ ದೀಪದ ಬೆಳಕಿನಂತೆ ಕ್ಷಣಿಕ. ಗುಣ–ಸಂಸ್ಕಾರದಿಂದ ಬರುವ ಗೌರವ ಸೂರ್ಯನಂತೆ ಶಾಶ್ವತ’ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಹೊಸಮಠದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ 2020-2021ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಯುವಜನತೆ ಈ ದೇಶದ ಭವಿಷ್ಯ. ಆದರೆ, ಕೆಲವು ಯುವಕರು ದುಶ್ಚಟಗಳಿಗೆ ಬಲಿಯಾಗಿ, ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವ್ಯಸನಗಳಿಂದ ಹೊರಬರದೆ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶಿಸ್ತುಬದ್ಧ ಜೀವನ, ಮೌಲ್ಯಯುತ ಬಾಳ್ವೆಯನ್ನು ಶಿಕ್ಷಣ ರೂಪಿಸುತ್ತದೆ. ವಿದ್ಯೆಯ ಜತೆಗೆ ಸಂಸ್ಕಾರವನ್ನೂ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸ್ಥಳೀಯ ಆಡಳಿತ ಮಂಡಳಿ ನಿರ್ದೇಶಕ ನಾಗೇಂದ್ರ ಕಟಕೋಳ, ಕಾಲೇಜಿನ ಪ್ರಾಚಾರ್ಯ ಎಂ.ವಿ. ಕುಲಕರ್ಣಿ ಹಾಗೂ ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.