ಹಾವೇರಿ: ಹಿಮವತ್ ಕೇದಾರ ವೈರಾಗ್ಯ ಪೀಠದ ಹಿಂದಿನ 320ನೇ ಲಿಂಗೈಕ್ಯ ಜಗದ್ಗುರು 1008 ನೀಲಕಂಠಲಿಂಗ ಶಿವಾಚಾರ್ಯರ ಪಟ್ಟಾಧಿಕಾರದ ಶತಮಾನೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರು ಗ್ರಾಮದಲ್ಲಿ ಅ.1ರಂದು ಹಮ್ಮಿಕೊಂಡಿದ್ದೇವೆ ಎಂದು ಧಾರವಾಡದ ನೀಲಕಂಠೇಶ್ವರ ಕ್ಷೇತ್ರ ಟ್ರಸ್ಟ್ನ ರಾಷ್ಟ್ರೀಯ ಸಂಚಾಲಕ ನಾಗನಗೌಡ ನೀರಲಗಿ ಪಾಟೀಲ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಂದು ಬೆಳಿಗ್ಗೆ 7 ಗಂಟೆಗೆ ವಿವಿಧ ಸ್ವಾಮೀಜಿಗಳು ಮತ್ತು ಭಕ್ತ ವೃಂದದಿಂದ ಗ್ರಾಮದ ಅಗಸಿಯಿಂದ ಕಲ್ಮೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 8 ರಿಂದ ಶ್ರೀಗಳ ಪೂರ್ವಜರ ಮನೆಯ ಗದ್ದಿಗೆಯಲ್ಲಿ ಇರುವ ರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ ಮತ್ತು ಕಲ್ಮೇಶ್ವರ, ವೀರಭದ್ರಕಾಳಿಗೆ ರುದ್ರಾಭಿಷೇಕ ನೆರವೇರುವುದು ಎಂದರು.
ಬೆಳಿಗ್ಗೆ 11 ಗಂಟೆಗೆ ಶ್ರೀಗಳ 100 ವರ್ಷದ ಪಟ್ಟಾಧಿಕಾರ ಮಹೋತ್ಸವದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಗುರುಗಳಿಗೆ ನುಡಿನಮನ ಹಾಗೂ ಪುಷ್ಪಾಂಜಲಿ ನಡೆಯಲಿದೆ. 2021ರ ಅ.1ರಿಂದ 2020ರ ಅ.1ರವರೆಗೆ ಒಂದು ವರ್ಷ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸಮಾರೋಪ ಸಮಾರಂಭ:
2022ರ ಅ.1ರಂದು ಉತ್ತರಾಖಂಡ ರಾಜ್ಯದ ಕೇದಾರನಾಥದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಭದ್ರಕಾಳಿ ಪ್ರಶಸ್ತಿ, ಭದ್ರ, ರುದ್ರ, ನಂದೀಶ್ವರ, ವೃಷಭ, ಭೃಂಗಿ, ಸ್ಕಂದ, ಘಂಟಾಕರಣ, ಕಾಳಭೈರವ, ಅಮೋಘಸಿದ್ಧ, ವಿಶ್ವಕರ್ಮ, ಭಗೀರಥ ಹಾಗೂ ಶಿವಶರಣರ ಪ್ರಶಸ್ತಿ.. ಹೀಗೆ ಒಟ್ಟು 13 ಪ್ರಶಸ್ತಿಗಳನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಮೋಘ ಸೇವೆ ಸಲ್ಲಿಸಿದವರಿಗೆ ಕೇದಾರನಾಥ ದೇವಸ್ಥಾನದ ಆವರಣದಲ್ಲಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚನ್ನಬಸಪ್ಪ ಚೂರಿ, ಶಶಿಧರ ಕಮ್ಮಾರ, ನಿಂಗಪ್ಪ ಕಾಡಮ್ಮನವರ, ಬಸಯ್ಯಸ್ವಾಮಿ ಹಿರೇಮಠ, ವೀರಣ್ಣ ಹಿರೇಮಠ, ಮಂಜು ಪೂಜಾರ್, ಮಲ್ಲಿಕಾರ್ಜುನ ಹಡಪದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.