ಹಾವೇರಿ: ಲೇಖಕಿ ಶಾಂತಾದೇವಿ ಕಣವಿಯವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಸರಳ ಆಪ್ತ ಕಾರ್ಯಕ್ರಮ ಇಲ್ಲಿಯ ಗೆಳೆಯರ ಬಳಗದ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿ ಕಲಾವಿದರ ಬಳಗ ಹಾಗೂ ಜೀವನ ಜ್ಯೋತಿ ನಗರ ಮತ್ತು ಗ್ರಾಮೀಣ ಸೇವಾ ಸಂಸ್ಥೆಯ ಆಯ್ದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಶಾಂತಾದೇವಿ ಅವರು ಅಪ್ಪಟ ಮಾತೃ ಹೃದಯಿ ಲೇಖಕಿಯಾಗಿದ್ದರು. ಮಧ್ಯಮ ವರ್ಗದ ಕೌಟುಂಬಿಕ ಬವಣೆಗಳನ್ನು ತುಂಬ ಹೃದ್ಯವಾಗಿ ಕಥೆಯಾಗಿಸುವ ಕಲೆ ಅವರಿಗೆ ಕರಗತವಾಗಿತ್ತು. ಶ್ರೇಷ್ಠ ಕವಿಗಳಾದ ಚನ್ನವೀರ ಕಣವಿಯವರ ಸಾಹಿತ್ಯ ಸಾಧನೆಯ ಹಿಂದೆ ಪಡಿನೆರಳಾಗಿದ್ದ ಶಾಂತಾದೇವಿಯವರ ನಿಧನದಿಂದಾಗಿ ಚೆಂಬೆಳಕಿನ ಬೆಳಕು ಮಾಸಿದಂತಾಗಿದೆ ಎಂದು ಶ್ರದ್ಧಾಂಜಲಿ ಸಭೆ ಅಭಿಪ್ರಾಯಪಟ್ಟಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಕಾರ್ಯದರ್ಶಿಗಳಾದ ಶಂಕರ ಬಡಿಗೇರ, ಶಿವಬಸವ ಮರಳಿಹಳ್ಳಿ, ನಿವೃತ್ತ ಕೃಷಿ ಅಧಿಕಾರಿ ಡಾ.ವಿ.ಪಿ.ದ್ಯಾಮಣ್ಣನವರ, ಕುಂಚ ಕಲಾವಿದ ಕರಿಯಪ್ಪ ಹಂಚಿನಮನಿ, ಸಾಹಿತಿಗಳಾದ ಸಿ.ಎಸ್. ಮರಳಿಹಳ್ಳಿ, ಸತೀಶ ಕುಲಕರ್ಣಿ, ನಾಟಕಕಾರ ಜಿ.ಎಂ. ಓಂಕಾರಣ್ಣನವರ, ಜೀವನ ಜ್ಯೋತಿ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ವರಿ ರವಿ ಸಾರಂಗಮಠ, ಕವಯತ್ರಿ ರೇಖಾ ಭೈರಕ್ಕನವರ, ಉಮಾ ಹೊರಡಿ, ಅನಿತಾ, ಶಿಕ್ಷಕರಾದ ಅರ್ಕಸಾಲಿ ಇದ್ದರು.
ಕೊನೆಯಲ್ಲಿ ಎರಡು ನಿಮಿಷ ಮೌನದೊಂದಿಗೆ ಸಭೆ ಮುಕ್ತಾಯಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.