ADVERTISEMENT

ದೀನ ಬಂಧುವಿಗೆ ಕಂಬನಿಯ ವಿದಾಯ

ಮಂಜುನಾಥ ರಾಠೋಡ
Published 30 ಡಿಸೆಂಬರ್ 2019, 9:32 IST
Last Updated 30 ಡಿಸೆಂಬರ್ 2019, 9:32 IST
ಕುಟುಂಬ ಸದಸ್ಯರೊಂದಿಗೆ ಡಾ.ದೀನಬಂಧು ಗುದ್ಲೆಪ್ಪ ಹಳ್ಳಿಕೇರಿ 
ಕುಟುಂಬ ಸದಸ್ಯರೊಂದಿಗೆ ಡಾ.ದೀನಬಂಧು ಗುದ್ಲೆಪ್ಪ ಹಳ್ಳಿಕೇರಿ    

ಹಾವೇರಿ:ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ತಾಲ್ಲೂಕಿನ ಹೊಸರಿತ್ತಿಯ ಡಾ.ದೀನಬಂಧು ಗುದ್ಲೆಪ್ಪ ಹಳ್ಳಿಕೇರಿ ನಿಧನಕ್ಕೆ ಹಾವೇರಿಯ ಜನತೆ ಕಂಬನಿ ಮಿಡಿಯಿತು.

ಹುಬ್ಬಳ್ಳಿಯಿಂದ ಹಾವೇರಿಯ ಜಿ.ಎಚ್‌. ಕಾಲೇಜು ಆವರಣಕ್ಕೆ ಪಾರ್ಥಿವ ಶರೀರ ತರುತ್ತಿದ್ದಂತೆ ಮೌನ ಆವರಿಸಿತು. ಕಾಲೇಜಿನ ಆವರಣದಲ್ಲಿನೆರೆದವರು ಭಾವುಕರಾದರು.ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಸಲ್ಲಿಸಿ, ಮೌನಾಚರಣೆ ನಡೆಸಿದರು. ದೀನಬಂಧು ಅವರು ಮಾಡಿದ ಸೇವೆ, ಸಮಾಜಕ್ಕೆನೀಡಿದ ಕೊಡುಗೆಯನ್ನು ಆಡಳಿತ ಮಂಡಳಿ ಸದಸ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಕ್ರಾಂತಿ:

ADVERTISEMENT

ಹಾವೇರಿ ತಾಲ್ಲೂಕಿನ ಹೊಸರಿತ್ತಿ ಗ್ರಾಮದಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಮತ್ತು ವೀರಮ್ಮ ಅವರ ಸುಪುತ್ರನಾಗಿ ಜುಲೈ 11, 1941ರಲ್ಲಿ ಜನಿಸಿದರು.ಬಾಲ್ಯದ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದರು. ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ಹುಬ್ಬಳ್ಳಿಗೆ ತೆರಳಿದರು. ಎಂ.ಎಸ್‌., ಎಫ್‌ಐಸಿಎಸ್‌, ಎಫ್‌ಐಎಎಂಎಸ್‌., ಎಫ್‌ಎಎಸ್‌ಎಂಎಸ್‌ ಶಿಕ್ಷಣವನ್ನು ಪೂರೈಸಿದರು.

1960ರಲ್ಲಿಯೇ ಜಿ.ವಿ. ಹಳ್ಳಿಕೇರಿ ಪ್ರೌಢಶಾಲೆಯನ್ನು ಆರಂಭಿಸಿದ್ದು, ಇವರ ಶೈಕ್ಷಣಿಕ ಕಾಳಜಿಯ ಪ್ರತೀಕವಾಗಿದೆ. ತಂದೆ ಗುದ್ಲೆಪ್ಪ ಹಳ್ಳಿಕೇರಿ ಅವರ ನಂತರ ದೀನಬಂಧು ಅವರು 1982ರಲ್ಲಿ ಈ ಸಂಸ್ಥೆಯನ್ನು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯವನ್ನಾಗಿಉನ್ನತೀಕರಿಸಿದರು. ವಿದ್ಯಾರ್ಥಿಗಳನ್ನು ಸ್ವಾವಲಂಬಿಯನ್ನಾಗಿ ಮಾಡುವ ದೃಷ್ಟಿಯಿಂದವೃತ್ತಿ ಶಿಕ್ಷಣ ವಿಭಾಗವನ್ನು ಆರಂಭಿಸಿ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾದರು. ಇಂತಹ ಹಲವಾರು ಶೈಕ್ಷಣಿಕ ಚಿಂತನೆ, ಸಾಧನೆಯಿಂದ ಹೊಸರಿತ್ತಿಯು ‘ಗ್ರಾಮೀಣ ಭಾಗದ ಶಿಕ್ಷಣ ಕಾಶಿ’ ಎನಿಸಿದೆ.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಸ್ಕೌಟ್ಸ್, ಸೇವಾದಳ, ವಿಜ್ಞಾನ ಕೇಂದ್ರದ ಚಟುವಟಿಕೆಗಳು ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಗಳಿಸಿವೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ‘ಹಳ್ಳಿಕೇರಿ ಸೇವಾಗೌರವ’ ಪ್ರಶಸ್ತಿಯನ್ನು ನೀಡುವ ಪರಿಪಾಠವನ್ನು ಅವರು ಮುಂದುವರಿಸಿಕೊಂಡು ಬಂದಿದ್ದರು.

ಗುರುಕುಲ:

ಕರ್ನಾಟಕ ಏಕೀಕರಣದ ಶಿಲ್ಪಿಗುದ್ಲೆಪ್ಪಹಳ್ಳಿಕೇರಿಅವರ ಕನಸಿನ ಕೂಸಾದ ‘ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ’ಯು 1983–84ನೇ ಸಾಲಿನಲ್ಲಿ ಆರಂಭಗೊಂಡಿತು. ಇಲ್ಲಿ 5ರಿಂದ 10ನೇ ತರಗತಿ ತನಕ ವಸತಿ ಸಹಿತ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಅಕ್ಷರ, ಅನ್ನ ಹಾಗೂ ಸಂಸ್ಕಾರದ ತ್ರಿವಿಧ ದಾಸೋಹ ಇಲ್ಲಿನ ವಿಶೇಷ. ತಂದೆಯ ನಂತರ ಡಾ.ದೀನಬಂಧು ಗುದ್ಲೆಪ್ಪ ಹಳ್ಳಿಕೇರಿ ಅವರೇ ಶಾಲೆಯನ್ನು ಮುನ್ನಡೆಸಿದರು.

ಹಾವೇರಿ ಜಿಲ್ಲಾಡಳಿತವು ದೀನಬಂಧು ಅವರ ಶೈಕ್ಷಣಿಕ ಸಾಧನೆ ಗುರುತಿಸಿ, ಗಣರಾಜ್ಯೋತ್ಸವ ಸಮಾರಂಭದಂದು ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.