ರಟ್ಟೀಹಳ್ಳಿ: ‘ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳ ಹೆಸರಿನಲ್ಲಿ ಮನೆಗಳಿಗೆ ಕಾರ್ಡ್ಗಳನ್ನು ಹಂಚುವ ಮೂಲಕ ಸಾಮಾನ್ಯ ಜನರಿಗೆ ಆಮಿಷ ಒಡ್ಡುತ್ತಿದೆ. ಗ್ಯಾರಂಟಿಗಳಿಗೆ ಯಾವುದೇ ಮಾನ್ಯತೆ ಇಲ್ಲ. ದೇಶದ ಸುರಕ್ಷತೆ, ಆರ್ಥಿಕ ಅಭಿವೃದ್ಧಿ ಮೋದಿ ನೇತೃತ್ವದ ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಮಕರಿ, ನಾಗವಂದ ಗ್ರಾಮಗಳಲ್ಲಿ ಗುರುವಾರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು.
‘ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ, ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಲು ಬಿಜೆಪಿಗೆ ಮತ ಹಾಕಿ, ಗ್ಯಾರಂಟಿ ಕಾರ್ಡ್ ಹಂಚದಂತೆ ಚುನಾವಣಾ ಆಯೋಗದ ಆದೇಶವಾಗಿದೆ. ಇನ್ನು ಮುಂದೆ ಅವರು ಗ್ಯಾರಂಟಿ ಕಾರ್ಡ್ ಹಂಚಲು ಬಂದರೆ ಚುನಾವಣಾ ಆಯೋಗಕ್ಕೆ ದೂರು ನೀಡಿ. ಕಾಂಗ್ರೆಸ್ನ ಅನಿಷ್ಟ ಪದ್ಧತಿಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ’ ಎಂದರು.
ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಲೋಕಸಭಾ ಚುನಾವಣೆ ಇರುವುದರಿಂದ ಮತ್ತೊಮ್ಮೆ ಜನರನ್ನು ಸುಲಭವಾಗಿ ಮೋಸ ಮಾಡಲು ಕಾಂಗ್ರೆಸ್ ಸದ್ಯ ಯೋಜನೆ ಮುಂದುವರೆಸಿದೆ. ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂದರು.
ಮುಖಂಡರಾದ ಎಸ್.ಎಸ್. ಪಾಟೀಲ, ಎನ್.ಎಂ. ಈಟೇರ, ಪಾಲಾಕ್ಷಗೌಡ ಪಾಟೀಲ, ಆರ್.ಎನ್. ಗಂಗೋಳ, ದೇವರಾಜ ನಾಗಣ್ಣನವರ, ಲಿಂಗರಾಜ ಚಪ್ಪರದಹಳ್ಳಿ, ಸೃಷ್ಟಿ ಪಾಟೀಲ, ರವಿಶಂಕರ ಬಾಳಿಕಾಯಿ, ಆನಂದಪ್ಪ ಹಾದಿಮನಿ, ಮಾಲತೇಶ ಗಂಗೋಳ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.