ಹಾವೇರಿ: ಲಾಕ್ಡೌನ್ನಿಂದ ಕಾರ್ಯಕ್ರಮಗಳು ರದ್ದಾದ ಕಾರಣ ತೀವ್ರ ಸಂಕಷ್ಟದಲ್ಲಿರುವ ಕಲಾವಿದರಿಗೆ ಪರಿಹಾರ ನೀಡಬೇಕು ಎಂದು ಜಿಲ್ಲೆಯ ಕಲಾವಿದರು ಮನವಿ ಮಾಡಿದ್ದಾರೆ.
ಕೊರೊನಾ ಸೋಂಕು ಹಾವಳಿಯಿಂದ ಎರಡು ತಿಂಗಳು ದೇಶದಾದ್ಯಂತ ಲಾಕ್ಡೌಕ್ ಜಾರಿಯಾಯಿತು. ಇದರಿಂದ ಧಾರ್ಮಿಕ ಸಭೆ, ಮದುವೆ ಹಾಗೂ ಇತರೆ ಕಾರ್ಯಕ್ರಮಗಳು ರದ್ದಾದವು. ಎಲ್ಲಾ ಕಲಾವಿದರಿಗೆ ತಲಾ ₹ 2 ಸಾವಿರ ಸಹಾಯಧನ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಇಲ್ಲಿಯವರೆಗೂ ಯಾವುದೇ ಸಹಾಯಧನ ನೀಡಿರುವುದಿಲ್ಲ ಎಂದು ಕಲಾವಿದ ವೀರಭದ್ರಪ್ಪ ಎಸ್.ಹೊಮ್ಮರಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಜನವರಿಯಿಂದ ಜೂನ್ವರೆಗೆ ಕಲಾವಿದರಿಗೆ ಉತ್ತಮ ಸಮಯ. ಹೀಗಾಗಿ ಲಾಕ್ಡೌನ್ ತೆರವುಗೊಂಡ ನಂತರವೂ ಈ ವರ್ಷ ಯಾವುದೇ ಕಾರ್ಯಕ್ರಮಗಳು ಸಿಗುವುದಿಲ್ಲ. ಮುಂದಿನ ವರ್ಷದವರೆಗೂ ಮತ್ತೆ ಕಾಯಬೇಕು. ಇದರಿಂದ ಕಲಾವಿದರು ಮತ್ತು ಸಹ ಕಲಾವಿದರ ಕುಟುಂಬಗಳು ಜೀವನ ನಿರ್ವಹಣೆ ಮಾಡುವುದಕ್ಕೂ ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲ ವರ್ಗದವರಿಗೆ ಕೊಟ್ಟಂತೆ ನಮಗೂ ಪರಿಹಾರ ನೀಡಬೇಕು ಎಂದು ಕಲಾವಿದ ಗುರುಮಹಾಂತಯ್ಯ ಆರಾಧ್ಯಮಠ ಒತ್ತಾಯಿಸಿದ್ದಾರೆ.
ಜಿಲ್ಲಾ ಕಲಾವಿದರ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಬಡವಪ್ಪ ಆನವಟ್ಟಿ, ವೀರಯ್ಯ ವಿ.ಸಂಕಿನಮಠ ಸೇರಿದಂತೆ ಇತರೆ ಕಲಾವಿದರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.