ADVERTISEMENT

ಸಚಿವ ಸ್ಥಾನ ನೀಡುವಲ್ಲಿ ಗಂಗಾಮತಸ್ಥರ ಕಡೆಗಣನೆ: ಪಾಠ ಕಲಿಸುತ್ತೇವೆಂದ ಸಮುದಾಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 9:00 IST
Last Updated 5 ಆಗಸ್ಟ್ 2021, 9:00 IST
ವಾಸುದೇವಮೂರ್ತಿ
ವಾಸುದೇವಮೂರ್ತಿ   

ಹಾವೇರಿ: ‘ರಾಜ್ಯ ಬಿಜೆಪಿ ಸಚಿವ ಸಂಪುಟದಲ್ಲಿ ಗಂಗಾಮತಸ್ಥರ ಸಮಾಜವನ್ನು ಕಡೆಗಣಿಸಿರುವುದು ಖಂಡನೀಯ. ಮುಂಬರುವ ಚುನಾವಣೆಯಲ್ಲಿ ಸಮುದಾಯದವರು ಒಗ್ಗಟ್ಟಾಗಿ ತಕ್ಕ ಪಾಠ ಕಲಿಸುತ್ತೇವೆ’ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಜಿಲ್ಲಾ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷ ವಾಸುದೇವಮೂರ್ತಿ ಮತ್ತು ಅಧ್ಯಕ್ಷ ಮಂಜುನಾಥ ಎಫ್‌.ಭೋವಿ ಎಚ್ಚರಿಕೆ ನೀಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೊಲಿ, ಕಬ್ಬಲಿಗ, ಅಂಬಿಗ, ಗಂಗಾಮತ ಸಮಾಜವೆಂದು ಕರೆಸಿಕೊಳ್ಳುವ ನಮ್ಮ ಸಮುದಾಯದವರು ರಾಜ್ಯದಲ್ಲಿ 40–50 ಲಕ್ಷ ಜನಸಂಖ್ಯೆ ಹೊಂದಿದೆ. ಲೋಕಸಭೆ ಚುನಾವಣೆಗೂ ಮುನ್ನ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಮತ ಹಾಕಿಸಿಕೊಂಡು ಸಮಾಜದವರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಮ್ಮ ಸಮುದಾಯವರಾದ ಎನ್‌.ರವಿಕುಮಾರ, ಲಾಲಜಿ ಮಂಡೇನ್‌, ಸಾಯಿಬಣ್ಣಾ ತಳವಾರ ಒಟ್ಟು ಮೂವರು ಶಾಸಕರಿದ್ದಾರೆ. ಒಬ್ಬರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು. ಮುಂಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಸಮುದಾಯಕ್ಕೆ ಆದ್ಯತೆ ನೀಡಬೇಕು. ಹಾನಗಲ್‌ ಉಪ ಚುನಾವಣೆಯಲ್ಲಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಶಂಕ್ರಣ್ಣ ಅಂಬಿಗರ, ಭರಮಪ್ಪ ಉಳಗಿ, ಮಂಜುನಾಥ ಸುಣಗಾರ, ರಾಜೇಶ ಬಾರ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.