ಹಾವೇರಿ: ‘ಜಿಲ್ಲೆಯಲ್ಲಿ ಇತ್ತೀಚೆಗೆ ರಾಸುಗಳಿಗೆ ಚರ್ಮ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ರೈತರು ನಿರ್ಲಕ್ಷ್ಯ ಮಾಡದೆ ರೋಗ ಲಕ್ಷಣ ಕಂಡು ಬಂದರೆ ಸಮೀಪದ ಪಶು ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಕೊಡಿಸಬೇಕು’ ಎಂದು ಪಶುಪಾಲನೆ ಮತ್ತು ಪಶುವೈದ್ಯೆ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜು ಕೂಲೇರ ಹೇಳಿದರು.
ಹಾವೇರಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಿಶ್ರ ತಳಿ ಹಾಗೂ ದೇಶಿ ಆಕಳು ಮತ್ತು ಕರುಗಳ ಪ್ರದರ್ಶನ ಮತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪ್ರತಿಯೊಬ್ಬ ರೈತರು ಜಾನುವಾರು ಪ್ರದರ್ಶನದ ಮಹತ್ವ ಅರಿತುಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಎಲ್ಲಾ ರೈತರು ಜಾನುವಾರುಗಳಿಗೆ ಕಿವಿ ಓಲೆ ಹಾಗೂ ಕಾಲುಬಾಯಿ ಲಸಿಕೆ ಹಾಕಿಸಿ ರಾಸುಗಳನ್ನು ಕಾಯಿಲೆಗೆ ತುತ್ತಾಗದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಡಾ.ಅಶೋಕ.ಪಿ ಮಾತನಾಡಿ, ಪಶುಪಾಲನೆ ಕೃಷಿಕರಿಗೆ ಬೆನ್ನೆಲುಬಾಗಿ ನಿಂತಿದೆ. ಪಶುಪಾಲನೆಯಿಂದ ಕೃಷಿಗೆ ಆಗುವ ಲಾಭಗಳು ಸಾಕಷ್ಟಿದೆ. ರೈತರು ಕೃಷಿಯಲ್ಲಿ ಈಗಿರುವ ಆಧುನಿಕ ತಳಿಗಳನ್ನು ಬಳಸಿ ಹೆಚ್ಚಿನ ಲಾಭ ಪಡೆಯಲು ಮುಂದಾಗಬೇಕು ಎಂದರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿ ಡಾ.ಮಹೇಶ ಕಡಗಿ ಮಾತನಾಡಿದರು, ಉಪನಿರ್ದೇಶಕ ಡಾ.ಗೋಪಿನಾಥ, ಸಹಾಯಕ ನಿರ್ದೇಶಕ ಡಾ.ಪರಮೇಶ ಎನ್. ಹುಬ್ಬಳ್ಳಿ ಮಾತನಾಡಿದರು. ಜಾನುವಾರು ಪ್ರದರ್ಶನದಲ್ಲಿ ಹರಳಹಳ್ಳಿ ಗ್ರಾಮದ ರೈತರ 50ಕ್ಕೂ ಹೆಚ್ಚು ಜಾನುವಾರುಗಳು ಪಾಲ್ಗೊಂಡಿದ್ದವು. ಪಾಲಿ ಕ್ಲಿನಿಕ್ನ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಬಿ ಸಣ್ಣಕ್ಕಿ ಬಹುಮಾನ ವಿತರಣೆಯಲ್ಲಿ ತೆಗೆದುಕೊಳ್ಳುವ ಮಾನದಂಡಗಳನ್ನು ರೈತರಿಗೆ ತಿಳಿಸಿ ಬಹುಮಾನ ವಿತರಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.