ಶಿಗ್ಗಾವಿ: ‘ಸನಾತನ ಧರ್ಮವು ಹಿಂದು ಸಮುದಾಯದವರಿಗೆ ಮಾರ್ಗದರ್ಶಿಯಾಗಿದ್ದು, ಅಂತಹ ಧರ್ಮವನ್ನು ಕಡೆಗಣಿಸಿದವರು ನಾಶವಾಗಿ ಹೋಗುತ್ತಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲ್ಲೂಕಿನ ಬಿಸನಳ್ಳಿ ಗ್ರಾಮದ ಪಂಚಾಚಾರ್ಯ ವೇದ, ಆಗಮನ, ಸಂಗೀತ ಪಾಠ ಶಾಲೆ ಆವರಣದಲ್ಲಿ ಸೋಮವಾರ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆ, ಸಿದ್ಧಾಂತ ಶಿಖಾಮಣಿ ಪಾರಾಯಣ, ಶಿವದೀಕ್ಷಾ ಅಯ್ಯಾಚಾರ, ಉಚಿತ ಸಾಮೂಹಿಕ ವಿವಾಹ, ಪಾಠಶಾಲೆ ದಶಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸನಾತನ ಧರ್ಮ ಎಂದಿಗೂ, ಯಾರಿಂದಲೂ ನಾಶವಾಗಲು ಸಾಧ್ಯವಿಲ್ಲ. ಆದರೆ ಕೆಲವರು ಇತಿಹಾಸ ತಿಳಿಯದೇ ಸನಾತನ ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ. ಸನಾತ ಧರ್ಮವೆಂದರೆ ಉನ್ನತ, ಮೌಲ್ಯಾಧಾರಿತ ಬದುಕು ನಡೆಸುವ ಪದ್ಧತಿ. ಹೀಗಾಗಿ ಕೇಂದ್ರ ಸರ್ಕಾರ ಸಾಂಸ್ಕೃತಿಕ ಪುನರುತ್ಥಾನ, ರಾಮ ಮಂದಿರ ನಿರ್ಮಾಣ ಮಾಡುತ್ತಿದೆ ಎಂದರು.
ಕಾಶಿಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ, ಅರಳಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಗುಳೇದಗುಡ್ಡದ ನೀಲಕಂಠ ಸ್ವಾಮೀಜಿ, ಹಿರೇಮಣಕಟ್ಟಿ ವಿಶ್ವಾರಾಧ್ಯ ಸ್ವಾಮೀಜಿ, ಹೂವಿನಶಿಗ್ಲಿ ಚನ್ನವೀರಸ್ವಾಮೀಜಿ, ಹಾರನಹಳ್ಳಿ ಚೇತನ ದೇವರು ಮಾತನಾಡಿದರು.
ನರೆಗಲ್ನ ಅನ್ನದಾನೇಶ್ವರ ಕಾಲೇಜಿನ ಪ್ರೊ.ಕಲ್ಲಯ್ಯ ಹಿರೇಮಠ ಉಪನ್ಯಾಸ ನೀಡಿದರು. ಬೆಳಗಾವಿ ರುದ್ರಣ್ಣ ಚಂದರಗಿ ತುಲಾಭಾರ ಸೇವೆ ಸಲ್ಲಿಸಿದರು.
ಬೆಂಗಳೂರಿನ ಮಲ್ಲನಗೌಡ ಪಾಟೀಲ ಅವರಿಗೆ ‘ಕಲಾವಿನ್ಯಾಸ ರತ್ನ’, ಹಾವೇರಿ ಮಹಾಂತೇಶ ತೋಟದ ಅವರಿಗೆ ‘ಸೇವಾ ರತ್ನ’ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಾಚಾರ್ಯ ಆರ್.ಎಸ್.ಭಟ್ಟ, ಮುಖಂಡರಾದ ನರಹರಿ ಕಟ್ಟಿ, ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ತಿಪ್ಪಣ್ಣ ಸಾತಣ್ಣವರ, ಗದಿಗಯ್ಯ ಸದಾಶಿವಪೇಟೆಮಠ, ಅರ್ಜುನ ಹಂಚಿನಮನಿ, ಈರಣ್ಣ ನರಗುಂದ, ಕಲ್ಲಪ್ಪ ಆಜೂರ, ಮುರಗೇಶ ಆಜೂರ, ಗಂಗಣ್ಣ ಬಡ್ಡಿ, ಶಂಭಣ್ಣ ಆಜೂರ, ಸಮಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.