ಹಾವೇರಿ: ಜನಸಂಘದ ಮೊದಲ ಅಧ್ಯಕ್ಷರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ ಹಾಗೂ ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ ಅವರ 100ನೇ ಜನ್ಮದಿನ ಕಾರ್ಯಕ್ರಮವನ್ನು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ‘ಕಾಂಗ್ರೆಸ್ಸಿನ ದೇಶ ವಿರೋಧಿ ನೀತಿಯಿಂದ ಬೇಸತ್ತು ಆ ಪಕ್ಷದಿಂದ ಹೊರಬಂದು ಅಂದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರಾಗಿದ್ದ ಡಾ.ಕೇಶವ ಬಲಿರಾಮ್ ಹೆಡಗೇವಾರ ಅವರ ಮಾರ್ಗದರ್ಶನದಂತೆ ಭಾರತೀಯ ಜನಸಂಘವನ್ನು ಸ್ಥಾಪಿಸಿ, ರಾಷ್ಟ್ರೀಯ ವಿಚಾರಧಾರೆಯೊಂದಿಗೆ ರಾಜಕೀಯ ಪಕ್ಷವೊಂದು ದೇಶದಲ್ಲಿ ಕೆಲಸ ಮಾಡುವಂತೆ ಅನುವು ಮಾಡಿಕೊಟ್ಟ ಪರಿಣಾಮ ನಾವೆಲ್ಲರೂ ಇಂದು ಒಂದು ಪಕ್ಷದಲ್ಲಿ ಕೆಲಸ ಮಾಡುವಂತಾಗಿದೆ’ ಎಂದರು.
ಶಾಸಕ ನೆಹರು ಓಲೆಕಾರ ಮಾತನಾಡಿ, ಬಿಜೆಪಿ ಇಂದು ಭಾರತದಾದ್ಯಂತ ತನ್ನ ಬೇರುಗಳನ್ನು ಭದ್ರವಾಗಿ ಊರಿರಲು ಸಾಧ್ಯವಾಗಿದ್ದರೆ ಅದು ಡಾ.ಶ್ಯಾಮಪ್ರಸಾದ ಮುಖರ್ಜಿ ಹಾಗೂ ಜಗನ್ನಾಥರಾವ್ ಜೋಶಿಯವರಂಥ ಮಹನೀಯರ ಬಧ್ಧತೆ ಹಾಗೂ ತ್ಯಾಗದಿಂದ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಮುಳ್ಳೂರ, ಶಶಿಧರ ಹೊಸಳ್ಳಿ, ಹಾವೇರಿ ನಗರ ಮಂಡಳ ಅಧ್ಯಕ್ಷ ಗಿರೀಶ ತುಪ್ಪದ, ಗ್ರಾಮೀಣ ಮಂಡಳ ಆಧ್ಯಕ್ಷ ಬಸವರಾಜ ಕಳಸೂರು, ಹಾವೇರಿ ನಗರಾಭಿವೃದ್ದಿ ಪ್ರಾಧಿಕಾರದ ಆಧ್ಯಕ್ಷರಾದ ಶಿವಕುಮಾರ ಸಂಗೂರು, ನಗರಸಭೆ ಸದಸ್ಯ ಬಾಬುಸಾಬ ಮೋಮಿನಗಾರ, ಯುವ ಮೋರ್ಚಾದ ನಗರ ಘಟಕ ಅಧ್ಯಕ್ಷ ಮಂಜುನಾಥ ಮಡಿವಾಳರ, ಪ್ರಭು ಹಿಟ್ನಳ್ಳಿ, ಬಸವರಾಜ ಹಾಲಪ್ಪನವರ, ಮಂಜು ಇಟಗಿ, ದರ್ಶನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.