ಹಾನಗಲ್: ಮಾಧ್ಯಮಗಳು ಇಲ್ಲದೇ ಇದ್ದ ದಿನಗಳಲ್ಲಿ ನಾಟಕ ಸಾಂಸ್ಕೃತಿಕ, ಸಾಮಾಜಿಕ ಜಾಗೃತಿಯ ಮಾಧ್ಯಮವಾಗಿತ್ತು ಎಂದು ಸಾಹಿತಿ ಮಾರುತಿ ಶಿಡ್ಲಾಪುರ ನುಡಿದರು.
ಶನಿವಾರ ಇಲ್ಲಿನ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶೇಷಗಿರಿಯ ಗಜಾನನ ಯುವಕ ಮಂಡಳ, ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯ
ಆಯೋಜಿಸಿದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗ ಕಲಾವಿದರು ತಮ್ಮನ್ನು ಸಮಾಜಕ್ಕಾಗಿ ಅರ್ಪಿಸಿಕೊಳ್ಳುತ್ತಿದ್ದರು. ಪೌರಾಣಿಕ, ಸಾಮಾಜಿಕ ವಸ್ತು ವಿಷಯಗಳನ್ನು ನಾಟಕಗಳ ಮೂಲಕ ನೀಡಿ ಜೀವನೋತ್ಸಾಹ ನೀಡುತ್ತಿದ್ದರು. ಸಾಮಾಜಿಕ ಲೋಪಗಳನ್ನು ಸರಿಪಡಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾಟಕಗಳು ದೊಡ್ಡ ಕೊಡುಗೆ ನೀಡಿವೆ. ಇಂದು ಕಲೆ ಕಲಾವಿದರನ್ನು ಗೌರವಿಸುವ ಕಾಲ ಮತ್ತೆ ಬರಬೇಕಾಗಿದೆ. ಗ್ರಾಮಗಳು ಮತ್ತೆ ನಾಟಕಗಳತ್ತ
ಮುನ್ನಡೆಯಬೇಕಾಗಿದೆ ಎಂದರು.
ಸಾಹಿತಿ ಉದಯ ನಾಸಿಕ ಮಾತನಾಡಿ, ಕಲಾವಿದನ ಪರಿಪೂರ್ಣ ಅಭಿವ್ಯಕ್ತಿಯ ಮೂಲಕ ರಂಗ ಭೂಮಿ ಶಕ್ತಿಯುತವಾಗಿ ಬೆಳೆದಿದೆ. ರಂಗ ಕಲಾವಿದರು ಅತ್ಯಂತ ಕಷ್ಟದಲ್ಲಿ ರಂಗಭೂಮಿಯನ್ನು
ಉಳಿಸಿದ್ದಾರೆ. ಈಗ ಕಲೆಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ, ಪ್ರಭಾರ ಪ್ರಾಚಾರ್ಯ ಎಂ.ಬಿ.ನಾಯಕ ಮಾತನಾಡಿದರು.
ಯುವ ರಂಗ ಕಲಾವಿದ ಸೋಮನಾಥ ಗುರಪ್ಪನವರ ರಂಗ ಸಂದೇಶ ಓದಿದರು. ಡಾ.ವಿಶ್ವನಾಥ ಬೋಂದಾಡೆ, ಡಾ.ರಾಘವೇಂದ್ರ ಮಾಡಳ್ಳಿ, ಡಾ.ಹರೀಶ ತಿರಕಪ್ಪ, ಡಾ.ಪ್ರಕಾಶ ಹುಲ್ಲೂರ, ಡಾ.ಜಿತೇಂದ್ರ, ಡಾ.ಜಿ.ವಿ.ಪ್ರಕಾಶ, ಡಾ.ಬಿ.ಎಸ್.ರುದ್ರೇಶ, ಆರ್.ದಿನೇಶ, ಎಂ.ಎಂ.ನಿಂಗೋಜಿ, ರಂಗ ಕಲಾವಿದರಾದ ಸಿದ್ದಪ್ಪ ರೊಟ್ಟಿ, ಜಮೀರ ಪಠಾಣ, ಶಿವಮೂರ್ತಿ ಹುಣಸೀಹಳ್ಳಿ ಪಾಲ್ಗೊಂಡಿದ್ದರು.
ಹಿರಿಯ ರಂಗ ಕಲಾವಿದ ಹಾವೇರಿಯ ಕೆ.ಆರ್.ಹಿರೇಮಠ, ಧಾರವಾಡದ ರಂಗ ನಟಿ ರಂಜಿತಾ ಜಾಧವ ಅವರಿಗೆ ರಂಗ ಸನ್ಮಾನ ನೀಡಲಾಯಿತು.
ಸಂಗೀತ ಕಲಾವಿದರಾದ ಪ್ರತೀಕ್ಷಾ ಕೋಮಾರ, ಅಂಬಿಕಾ ಅಕ್ಕಿವಳ್ಳಿ, ಗಂಗಾ ಕೋಮಾರ ರಂಗ ಗೀತೆಗಳನ್ನು ಹಾಡಿದರು. ಶ್ರೀಪಾದ ಅಕ್ಕವಳ್ಳಿ ತಬಲಾ ಸಾಥ್ ನೀಡಿದರು. ಸ್ವಾತಿ ಬೈಲಣ್ಣನವರ ಸ್ವಾಗತಿಸಿದರು. ಸ್ಪೂರ್ತಿ ನಾಯಕ ಕಾರ್ಯಕ್ರಮ ನಿರೂಪಿಸಿದರು. ಶಾಜಿಯಾಖಾನ ಮುಗಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.