ADVERTISEMENT

ಗುರಿ ಮುಟ್ಟಲು ಕನಸು ಅಗತ್ಯ: ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 12:00 IST
Last Updated 6 ಸೆಪ್ಟೆಂಬರ್ 2021, 12:00 IST
ಹಾವೇರಿಯ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಭಾನುವಾರ ಸಾಹಿತಿ ಕಲಾವಿದರ ಬಳಗದ ವತಿಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು 
ಹಾವೇರಿಯ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಭಾನುವಾರ ಸಾಹಿತಿ ಕಲಾವಿದರ ಬಳಗದ ವತಿಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು    

ಹಾವೇರಿ: ‘ಕನಸುಗಳಿಲ್ಲದೆ ಗುರಿ ಮುಟ್ಟಲು ಸಾಧ್ಯವಿಲ್ಲ. ಪ್ರತಿಭೆ ಅಸಲು ಇದ್ದಂತೆ. ಪ್ರಶಸ್ತಿ ಅದಕ್ಕೆ ಸಿಗುವ ಬಡ್ಡಿ. ಗೌರವ ಮತ್ತು ಪುರಸ್ಕಾರಗಳು ಸಾಧನೆಗೆ ಪ್ರೇರಣೆ ನೀಡುತ್ತವೆ’ ಎಂದು ಕಲಾವಿದ ಕರಿಯಪ್ಪ ಹಂಚಿನಮನಿ ಅಭಿಪ್ರಾಯಪಟ್ಟರು.

ನಗರದ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಭಾನುವಾರ ಸಾಹಿತಿ ಕಲಾವಿದರ ಬಳಗ ಏರ್ಪಡಿಸಿದ್ದಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಶಸ್ತಿ ಪಡೆದವರು, ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಶಿಕ್ಷಕರಿಗೆ ಪ್ರಶಸ್ತಿಗಳು ಅವಶ್ಯ. ಭವಿಷ್ಯದ ಶಿಲ್ಪಿಗಳನ್ನು ರೂಪಿಸುವ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು. ಅವರಿಂದ ಅಕ್ಷರ ಕಲಿತ ನೂರಾರು ಮಕ್ಕಳು ಶಿಕ್ಷಕರನ್ನು ಜೀವನದ ಕೊನೆಯವರೆಗೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ’ ಎಂದರು.

ADVERTISEMENT

‘ಸಾಹಿತ್ಯ, ಶಿಕ್ಷಣ ಮತ್ತು ಕಲಾಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ್ದರಿಂದಲೇ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಇವರು ಸಮಾಜದೊಂದಿಗೆ ಬೆರೆತು ಬೆಳೆದ ಸಾಧಕರು’ ಎಂದರು.

ಈ ಬಾರಿಯ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಬ್ಯಾಡಗಿಯ ಜಮೀರ್ ರಿತ್ತಿ, ಹಿರೇಕೆರೂರಿನ ಪರಮೇಶ್ವರ ಹುಲ್ಮನಿ ಹಾಗೂ ಹಾವೇರಿಯ ಜಿ.ಎಸ್. ಹತ್ತಿಮತ್ತೂರ ಅವರನ್ನು ಸನ್ಮಾನಿಸಲಾಯಿತು.

ಅಭಿನಂದನಾ ನುಡಿಗಳನ್ನು ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಎಡಗೋಡ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ತೆವರಿ ಹಾಗೂ ಶರೀಫ ನದಾಫ ನುಡಿದರು. ಸರ್ವಶ್ರೀ ಎ.ಎಫ್. ರಿತ್ತಿ ವೀರೇಶ ಬೆಲ್ಲದ, ಭರಮಗೌಡ ಗಂಗಪ್ಪನವರ, ಶಕುಂತಲಾ ಹುಲ್ಮನಿ, ಶಾರದಾ ಹತ್ತಿಮತ್ತೂರ, ಸಾಹೇಬಬಿ ರಿತ್ತಿ, ಶಾಹೀನ್‍ತಾಜ್ ಫಾರುಕಿ ಪಾಲ್ಗೊಂಡಿದ್ದರು.

ಮನೋಜ ಹುಲ್ಮನಿ ಪ್ರಾರ್ಥನೆ ಹಾಡಿದರು. ಜಗದೀಶ ಚೌಟಗಿ ಸ್ವಾಗತಿಸಿದರೆ, ಕಾರ್ಯಕ್ರಮವನ್ನು ನಾಗರಾಜ ನಡುವಿನಮಠ ನಡೆಸಿದರು. ಜೆ.ಸಿ ಅಧ್ಯಕ್ಷರಾದ ಮಂಜುನಾಥ ಚೂರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.