ADVERTISEMENT

‘ಅವ್ವ’ ಶಿಶು ಪಾಲನಾ ಕೇಂದ್ರಕ್ಕೆ ಚಾಲನೆ

ಮಕ್ಕಳ ಆರೈಕೆಗೆ ಆಯಾಗಳ ನೇಮಕ: ಕೇಂದ್ರಕ್ಕೆ 8 ಮಕ್ಕಳು ದಾಖಲು

​ಪ್ರಜಾವಾಣಿ ವಾರ್ತೆ
Published 16 ಮೇ 2022, 13:48 IST
Last Updated 16 ಮೇ 2022, 13:48 IST
ಹಾವೇರಿ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ‘ಅವ್ವ’ ಶಿಶು ಪಾಲನಾ ಕೇಂದ್ರವನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಶ್ರೀನಿವಾಸ ಆಲದರ್ತಿ, ಪರಿಮಳಾ ಜೈನ್‌ ಇದ್ದಾರೆ 
ಹಾವೇರಿ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ‘ಅವ್ವ’ ಶಿಶು ಪಾಲನಾ ಕೇಂದ್ರವನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಶ್ರೀನಿವಾಸ ಆಲದರ್ತಿ, ಪರಿಮಳಾ ಜೈನ್‌ ಇದ್ದಾರೆ    

ಹಾವೇರಿ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರ ಮಕ್ಕಳ (5 ವರ್ಷದೊಳಗಿನ) ಆರೈಕೆಗೆ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಆರಂಭಿಸಲಾದ ‘ಅವ್ವ’ ಶಿಶು ಪಾಲನಾ ಕೇಂದ್ರವನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಉದ್ಘಾಟಿಸಿದರು.

ಸೋಮವಾರ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ‘ಅವ್ವ’ ಶಿಶು ಪಾಲನಾ ಕೇಂದ್ರ ಉದ್ಘಾಟಿಸಿದ ಜಿಲ್ಲಾಧಿಕಾರಿಗಳು, ಪಾಲನಾ ಕೇಂದ್ರದಲ್ಲಿ ಇರಿಸಲಾದ ಮಕ್ಕಳ ತೊಟ್ಟಿಲಿನಲ್ಲಿ ನೌಕರರ ಮಗುವನ್ನು ಮಲಗಿಸಿ ಸಂತಸ ಪಟ್ಟರು.

ಕಚೇರಿ ಕೆಲಸದ ಸಮಯದಲ್ಲಿ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ವ್ಯವಸ್ಥೆ ಇಲ್ಲದ ಕಾಯಂ ಹಾಗೂ ಹೊರಗುತ್ತಿಗೆ ಮಹಿಳಾ ನೌಕರರು ಈ ಕೇಂದ್ರದಲ್ಲಿ 0-5 ವರ್ಷದೊಳಗಿನ ತಮ್ಮ ಮಕ್ಕಳನ್ನು ‘ಅವ್ವ’ ಶಿಶು ಪಾಲನಾ ಕೇಂದ್ರದಲ್ಲಿ ಬಿಡಬಹುದು. ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಮಕ್ಕಳ ಆರೈಕೆಗೆ ಆಯಾಗಳನ್ನು ನೇಮಕ ಮಾಡಲಾಗಿದೆ ಹಾಗೂ ಅರ್ಹ ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣ ನೀಡಲು ಶಿಕ್ಷಕರನ್ನು ಸಹ ನೇಮಕ ಮಾಡಲಾಗಿದೆ ಎಂದರು.

ADVERTISEMENT

ಮಕ್ಕಳಿಗೆ ಅಲ್ಪ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆಟೋಟಕ್ಕೆ ಶಿಶು ಪಾಲನಾ ಕೇಂದ್ರದಲ್ಲಿ ಮಕ್ಕಳ ಆಟಿಕೆಗಳು, ತೊಟ್ಟಿಲು, ಆಕರ್ಷಕ ಗೋಡೆ ಬರಹ, ತೊಟ್ಟಿ, ಅಕ್ಷರ ಪಟ, ಚಿಕ್ಕ ಕುರ್ಚಿಗಳು ಸೇರಿದಂತೆ ಮಕ್ಕಳ ಆಕರ್ಷಣೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಈ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಕೇಂದ್ರದಲ್ಲಿ ಆರಂಭಿಕವಾಗಿ ಎಂಟು ಮಕ್ಕಳು ದಾಖಲಾಗಿದ್ದಾರೆ ಎಂದರು.

ಹೆಚ್ಚು ಮಹಿಳಾ ಕಾರ್ಮಿಕರು ಕೆಲಸಮಾಡುವ ರಾಣೇಬೆನ್ನೂರಲ್ಲಿ ಕೈಮಗ್ಗ ಹಾಗೂ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತಲಾ ಒಂದೊಂದು ‘ಅವ್ವ’ ಕೇಂದ್ರಗಳನ್ನು ಶೀಘ್ರ ಆರಂಭಿಸಲಾಗುವುದು. ಹೆಚ್ಚು ಮಹಿಳಾ ಕಾರ್ಮಿಕರು ಹೊಂದಿರುವ ತಾಲ್ಲೂಕು ಕೇಂದ್ರಗಳಲ್ಲಿ ಕೇಂದ್ರ ತೆರೆಯಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌, ಅಬಕಾರಿ ಇಲಾಖೆ ಉಪ ಆಯುಕ್ತೆ ಶೈಲಜಾ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ, ಸ್ವಧಾರಾ ಕೇಂದ್ರದ ಪರಿಮಳಾ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.