ಹಾವೇರಿ: ‘ರಾಜ್ಯ ಸರ್ಕಾರವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ತಕ್ಷಣವೇ ಲಾಕ್ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದರು.
ನಗರದ ಡಿವೈಎಫ್ಐ- ಎಸ್ಎಫ್ಐ ಕಚೇರಿ ಎದುರು ಸೋಮವಾರ ರಾತ್ರಿ ರಾಜ್ಯ ಸಮಿತಿ ಕರೆಯ ಭಾಗವಾಗಿ ಡಿವೈಎಫ್ಐ ಜಿಲ್ಲಾ ಸಂಘಟನಾ ಸಮಿತಿಯು ಆಯೋಜಿಸಿದ್ದ ಚಿಮಣಿ ಮತ್ತು ಮೇಣದ ಬತ್ತಿ ಬೆಳಗಿ ವಿನೂತನವಾಗಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಸತತವಾಗಿ ಏರಿಸುತ್ತಿದೆ. ವಿದ್ಯುತ್ ಬಳಕೆಯ ಯಾವುದೇ ಐಷಾರಾಮಿ ವಸ್ತುಗಳನ್ನು ಹೊಂದಿರದ ಸಾಮಾನ್ಯ ಕುಟುಂಬಗಳೂ ತಿಂಗಳಿಗೆ ಸಾವಿರ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಭರಿಸಬೇಕಾದ ಸ್ಥಿತಿ ಉಂಟಾಗಿದೆ ಎಂದರು.
ವಕೀಲರಾದ ನಾರಾಯಣ ಕಾಳೆ ಮಾತನಾಡಿ, ಲಾಕ್ಡೌನ್ ತೆರವಿನ ನಂತರ ಬಾಕಿ ಬಿಲ್ಗಳನ್ನು ಒಟ್ಟಿಗೆ ಪಾವತಿಸುವ ಅನಿವಾರ್ಯ ಸ್ಥಿತಿಯನ್ನು ಸರ್ಕಾರ ನಿರ್ಮಿಸುತ್ತಿದೆ. ಇದು ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಭರಿಸಲಾಗದ ಬಹುದೊಡ್ಡ ಹೊರೆಯಾಗಲಿದೆ’ ಎಂದರು.
ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಸಿ ಅಕ್ಷತಾ ಮಾತನಾಡಿ, ಲಾಕ್ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ಗಳನ್ನು ರಾಜ್ಯ ಸರ್ಕಾರ ಮನ್ನಾ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಮತ್ತೆ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ತಾಲೂಕಿನ ದೇವಿಹೊಸೂರ ಹಾಗೂ ಕುರುಬಗೊಂಡ ಗ್ರಾಮ ಘಟಕಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಡಿವೈಎಫ್ಐ ಮುಖಂಡರಾದ ರೇಣುಕಾ ಕಹಾರ, ಹಸೀನಾ ಹೆಡಿಯಾಲ, ಮಲ್ಲೇಶ ಗೋಟನವರ, ಅರುಣ ಆರೇರ, ಸಿದ್ದಲಿಂಗ ಅಂಗಡಿ, ಅರುಣ ಬಿ.ಕೆ, ಕೃಷ್ಣಾ ಕಡಕೋಳ, ಕಿರಣ ಭಜಂತ್ರಿ, ಚಂದನ್ ಅಂಗಡಿ, ನಿಯಾಜ್ ತಿನಕಾಪೂರ, ಮಣಿಕಂಠ ಬಿ, ಅಕ್ಷತಾ ನಾ. ಕಹಾರ, ಸ್ವಾತಿ ಎಸ್.ಕೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.