ಹಾನಗಲ್: ತಾಲ್ಲೂಕಿನ ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಾಳಿ ಹೆಚ್ಚಾಗಿದ್ದು, ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.
ಕಳೆದ ಶನಿವಾರ ತಾಲ್ಲೂಕಿನ ಮಂತಗಿ, ಕಾಮನಹಳ್ಳಿ ಅರಣ್ಯ ಪರಿಸರದಲ್ಲಿ ಪ್ರತ್ಯಕ್ಷವಾಗಿದ್ದ ನಾಲ್ಕು ಆನೆಗಳು, ಕಳೆದ ಮೂರು ದಿನಗಳಿಂದ ವ್ಯಾಪ್ತಿ ಬದಲಿಸಿವೆ. ತಾಲ್ಲೂಕಿನ ಶಿರಗೋಡ, ಕ್ಯಾಸನೂರ, ಕೋಣನಕೊಪ್ಪ, ಹಿರೇಕಾಂಶಿ ಮತ್ತು ಗೊಂದಿ ಅರಣ್ಯ ಪ್ರದೇಶದಲ್ಲಿ ದಾಂಗುಡಿ ಇಟ್ಟಿವೆ. ಭತ್ತ, ಕಬ್ಬು, ಅಡಕೆ, ಬಾಳೆ ತೋಟಗಳನ್ನು ನಾಶ ಮಾಡಿವೆ.
ಈ ಮುಂಚೆ ರಾತ್ರಿ ಹೊತ್ತಿನಲ್ಲಿ ಮಾತ್ರ ಅರಣ್ಯದಂಚಿನ ಜಮೀನುಗಳಲ್ಲಿ ಕಾಣಿಸುತ್ತಿದ್ದ ಕಾಡಾನೆಗಳು, ಈಗ ಹಗಲಿನಲ್ಲೂ ಆಹಾರ ಅರಸಿ ದಾಳಿ ಇಡುತ್ತಿವೆ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ.
ಕಾತೂರ ಅರಣ್ಯ ತಲುಪಿ ಮುಂಡಗೋಡ ಕಾಡುಪ್ರದೇಶಕ್ಕೆ ತೆರಳಬೇಕಿದ್ದ ಕಾಡಾನೆಗಳು, ಇದಕ್ಕೆ ವ್ಯತಿರಿಕ್ತ ದಿಕ್ಕಿನಲ್ಲಿ ಸಂಚರಿಸುತ್ತಿವೆ. ಸದ್ಯ ಗೊಂದಿ ಸಮೀಪದ ಸೊರಬ ತಾಲ್ಲೂಕಿನ ಸರಹದ್ದಿನಲ್ಲಿವೆ. ಕಾಡಾನೆಳನ್ನು ಹಿಮ್ಮೆಟ್ಟಿಸಲು ನಿರಂತರ ಪ್ರಯತ್ನ ನಡೆದಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.