ADVERTISEMENT

ಮುಷ್ಕರ ಅಂತ್ಯ: 270 ಬಸ್‌ ಸಂಚಾರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:43 IST
Last Updated 21 ಏಪ್ರಿಲ್ 2021, 16:43 IST
ಹಾವೇರಿ ನಗರ ಬಸ್‌ ನಿಲ್ದಾಣಕ್ಕೆ ಬುಧವಾರ ಬಂದ ಸಾರಿಗೆ ಬಸ್‌ಗಳಿಂದ ಪ್ರಯಾಣಿಕರು ಇಳಿದು ಬಂದ ದೃಶ್ಯ  –ಪ್ರಜಾವಾಣಿ ಚಿತ್ರ 
ಹಾವೇರಿ ನಗರ ಬಸ್‌ ನಿಲ್ದಾಣಕ್ಕೆ ಬುಧವಾರ ಬಂದ ಸಾರಿಗೆ ಬಸ್‌ಗಳಿಂದ ಪ್ರಯಾಣಿಕರು ಇಳಿದು ಬಂದ ದೃಶ್ಯ  –ಪ್ರಜಾವಾಣಿ ಚಿತ್ರ    

ಹಾವೇರಿ: ವೇತನ ಪರಿಷ್ಕರಣೆಗೆ ಒತ್ತಾಯಿಸಿರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಏಪ್ರಿಲ್‌ 7ರಿಂದ ಅಂದರೆ 15 ದಿನಗಳಿಂದ ನಡೆಸುತ್ತಿದ್ದ ಮುಷ್ಕರ ಬುಧವಾರ ಸಂಜೆ ಅಂತ್ಯಗೊಂಡಿತು. ಮುಷ್ಕರದ ಅಂತಿಮ ದಿನದಂದು ಜಿಲ್ಲೆಯಲ್ಲಿ 270 ಬಸ್‌ಗಳು ಕಾರ್ಯಾಚರಣೆ ನಡೆಸಿದವು.

ಹಾವೇರಿ–56, ಬ್ಯಾಡಗಿ–33, ಹಿರೇಕೆರೂರು–60, ಹಾನಗಲ್‌–27, ಸವಣೂರು–27 ಹಾಗೂ ರಾಣೆಬೆನ್ನೂರು ಘಟಕದಿಂದ 68 ಬಸ್‌ಗಳು ಸಂಚಾರ ನಡೆಸಿದವು. ಮುಷ್ಕರ ಆರಂಭವಾದ ದಿನದಿಂದ ಇಲ್ಲಿಯವರೆಗೆ ಬುಧವಾರವೇ ಅತಿ ಹೆಚ್ಚು ಬಸ್‌ಗಳು ಕಾರ್ಯಾಚರಣೆ ನಡೆಸಿದವು.

ಹಾವೇರಿ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆಯಿಂದಲೇ ಬಸ್‌ಗಳ ಸಂಚಾರ ಹೆಚ್ಚಾಗಿತ್ತು. ಮಧ್ಯಾಹ್ನದ ನಂತರ ಮತ್ತಷ್ಟು ಬಸ್‌ಗಳು ಇತರ ಕಡೆಗಳಿಂದ ಹಾವೇರಿ ಬಸ್‌ ನಿಲ್ದಾಣಕ್ಕೆ ಬಂದವು. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ADVERTISEMENT

‘ವಜಾ ಮತ್ತು ಅಮಾನತುಗೊಂಡ ಸಿಬ್ಬಂದಿ ಹೊರತುಪಡಿಸಿ ಉಳಿದ ಸಿಬ್ಬಂದಿಗಳಲ್ಲಿ ಶೇ 95ರಷ್ಟು ನೌಕರರು ಕರ್ತವ್ಯಕ್ಕೆ ಬಂದಿದ್ದರು. ಬುಧವಾರ ಶೇ 50ರಷ್ಟು ಸಿಬ್ಬಂದಿಗೆ ಡ್ಯೂಟಿ ಮಾಡಲು ಅವಕಾಶ ಮಾಡಿಕೊಟ್ಟೆವು. ಹಾವೇರಿ ವಿಭಾಗದಿಂದ ಮಹಾರಾಷ್ಟ್ರದ ಕಡೆ ನಿತ್ಯ 18 ಬಸ್‌ಗಳು ಹೋಗುತ್ತಿದ್ದವು. ಆದರೆ, ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದು, ಲಾಕ್‌ಡೌನ್‌ ಆಗಿರುವುದಿರಂದ ಆ ಮಾರ್ಗಕ್ಕೆ ಬಸ್‌ಗಳನ್ನು ಕಳುಹಿಸಲಿಲ್ಲ’ ಎಂದು ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ಹೇಳಿದರು.

‘ಬುಧವಾರ ನಡೆದ ಬಸ್‌ಗಳ ಕಾರ್ಯಾಚರಣೆಯಿಂದ ₹20 ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದೆ. ನಾಳೆಯಿಂದ (ಏ.22) ಎಲ್ಲ ಮಾರ್ಗಗಳಿಗೂ ಬಸ್‌ಗಳು ನಿಗದಿಯಂತೆ ಸಂಚಾರ ನಡೆಸಲಿವೆ. ಪ್ರಯಾಣಿಕರು ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.