
ರಾಣೆಬೆನ್ನೂರು: ತಾಲ್ಲೂಕಿನಲ್ಲಿನ ನಕಲಿ ವೈದ್ಯರ ಹಾವಳಿಯನ್ನು ತಡೆಯಬೇಕು ಎಂದು ಒತ್ತಾಯಿಸಿ ಮಂಗಳವಾರ ಕರವೇ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಂತರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರಾಜೇಶ್ವರಿ ಕದರಮಂಡಲಗಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಮಿಕ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ತೆಗ್ಗಿನ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿಯ ಕೊರತೆಯಿಂದಾಗಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ಇವರು ಕೊಡುವ ಚಿಕಿತ್ಸೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ತಮ್ಮ ನೋವು, ಬಾಧೆಗಳನ್ನು ತಾಳಲಾರದೇ ನಕಲಿ ವೈದ್ಯರ ಬಳಿ ಹೋಗಿ ಅವರು ಕೇಳಿದಷ್ಟು ಹಣ ಕೊಟ್ಟು ಅವರು ಕೊಡುವ ಚುಚ್ಚು ಮದ್ದು ಮತ್ತು ಔಷಧಿ ಪಡೆಯುತ್ತಾರೆ ಎಂದು ದೂರಿದರು.
ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬಡ ಜನರು ಬಲಿಯಾಗುತ್ತಿದ್ದಾರೆ. ನಕಲಿ ವೈದ್ಯರು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಚಿಕಿತ್ಸೆ ನೀಡಿ ಔಷಧಿ ನೀಡುತ್ತಾರೆ. ತಾಲ್ಲೂಕು ಆರೋಗ್ಯ ಅಧಿಕಾರಿಗಳು ನಕಲಿ ವೈದ್ಯರ ಪರವಾನಗಿ ಮತ್ತು ವಿದ್ಯಾಹರ್ತೆ ಪರಿಸೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ತರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಎಎಂಎಸ್, ಬಿಎಚ್ಎಂಎಸ್ ಓದಿದ ಆಯರ್ವೇದ ವೈದ್ಯರು ಕೂಡ ಆಯುರ್ವೇದ ಔಷಧಿ ಮತ್ತು ಚಿಕಿತ್ಸೆ ನೀಡುವದನ್ನು ಬಿಟ್ಟು ರೋಗಿಗಳಿಗೆ ಇಂಗ್ಲೀಷ್ ಔಷಧಿ ಬರೆದುಕೊಡುತ್ತಿದ್ದಾರೆ. ಆಯುರ್ವೇದಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಒತ್ತು ನೀಡಿದೆ ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಮಾಕನೂರ, ಗಂಗಾಧರಯ್ಯ ಪಾಟೀಲ, ವಾಗೀಶ ಎಮ್ಮಿ, ಸಿದ್ಲಿಂಗಪ್ಪ ಮುದ್ದಿ, ಚಂದ್ರಪ್ಪ ಗುತ್ಯಮ್ಮನವರ, ಪರಶುರಾಮ್ ಹೆಳವಜ್ಜಿ, ವಾಗೀಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.