ಸವಣೂರು (ಹಾವೇರಿ): ಎತ್ತುಗಳನ್ನು ಖರೀದಿಸಲು ಹಾಗೂ ಟ್ರ್ಯಾಕ್ಟರ್ಗಳ ದುಬಾರಿ ಬಾಡಿಗೆ ಭರಿಸಲು ಸಾಧ್ಯವಾಗದ ಕಾರಣ, ತಾಲ್ಲೂಕಿನ ಜಲ್ಲಾಪುರ ಗ್ರಾಮದ ರೈತ ಶೇಖಪ್ಪ ಕುರುಬರ ಅವರು ಟಗರುಗಳ ಮೂಲಕ ಸಾಗುವಳಿ ಮಾಡಿ ಗಮನಸೆಳೆದಿದ್ದಾರೆ.
ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದ ಸೋಯಾಬಿನ್ ಬೆಳೆಯ ಮಧ್ಯದ ಕಳೆಯನ್ನು ತೆಗೆಯಲು ಟಗರಿಗೆ ನೊಗವನ್ನು ಕಟ್ಟಿ ಎಡೆಕುಂಟೆ ಹೊಡೆಯಲು ಆರಂಭಿಸಿದ್ದಾರೆ.
‘ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ಕೂಡ ಸಾಲ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಎತ್ತುಗಳನ್ನು ಖರೀದಿಸಲು ಕನಿಷ್ಠ ₹70ರಿಂದ 80 ಸಾವಿರವಾಗುತ್ತದೆ. ಎಲ್ಲಿಯೂ ಸಾಲ ಸಿಗದ ಕಾರಣ ಟಗರುಗಳ ಮೂಲಕ ಉಳುಮೆ ಮಾಡಿ, ಅಲ್ಪ ಪ್ರಮಾಣದಲ್ಲಿ ಆದ ಮಳೆಗೆ ಬಿತ್ತನೆ ಮಾಡಿದ್ದೇನೆ’ ಎಂದು ರೈತ ಶೇಖಪ್ಪ ತಿಳಿಸಿದರು.
‘ಕುರುಬರ ದೊಡ್ಡಿಯಲ್ಲಿ ಹತ್ತು ತಿಂಗಳ ಹಿಂದೆ ₹13 ಸಾವಿರಕ್ಕೆ ಎರಡು ಟಗರುಗಳನ್ನು ಖರೀದಿಸಿ, ಅವುಗಳಿಗೆ ‘ಕನಕ’ ಮತ್ತು ‘ರಾಯಣ್ಣ’ ಎಂದು ನಾಮಕರಣ ಮಾಡಿ, ಮಕ್ಕಳಂತೆ ಪೋಷಣೆ ಮಾಡಿದ್ದೇನೆ. ಹೊಲಕ್ಕೆ ಹೋಗುವಾಗ ಕೃಷಿ ಸಲಕರಣೆಗಳನ್ನು ಸಾಗಿಸಲು ಮತ್ತು ಮನೆಗೆ ನೀರು ತರಲೆಂದು ಇರುವ ಪುಟ್ಟ ಬಂಡಿಯ ನೊಗಕ್ಕೆ ಟಗರುಗಳು ಹೆಗಲು ಕೊಡುತ್ತಿವೆ’ ಎಂದು ಶೇಖಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.