ಹಾವೇರಿ: ‘ನಮ್ಮಲ್ಲಿರುವ ಸಮೃದ್ಧ ಇತಿಹಾಸ, ಸಂಸ್ಕೃತಿಯನ್ನು ಅಳವಡಿಸಿಕೊಂಡು ನಮ್ಮದೇ ಆದ ವಸ್ತು ಸಂಗ್ರಹಾಲಯ ಕಟ್ಟುವಂತಾಗಬೇಕು. ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸುವ ಇಂತಹ ಕೆಲಸವನ್ನು ಚಿತ್ರದುರ್ಗದಲ್ಲಿ ಮುರುಘಾಶ್ರೀ ಮ್ಯೂಸಿಯಂ ಮಾಡಿದೆ’ ಎಂದು ಚಿತ್ರದುರ್ಗದ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ನುಡಿದರು.
ಇಲ್ಲಿಯ ನಂದಿ ಲೇಔಟ್ನ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ‘ಕಲಾ ವಿಚಾರ ಮಂಥನ’ದಲ್ಲಿ ಅವರು ಮಾತನಾಡಿದರು.
ಕಲೆ ಎಂಬುದು ಭಾವನೆಗಳ ಮರು ಉತ್ಪತ್ತಿ. ಭೌತಿಕ ಯಾನಕ್ಕಿಂತ ಸಾಂಸ್ಕೃತಿಕ ಯಾನ ಶ್ರೇಷ್ಠ. ಹಣ, ಸಂಪತ್ತು, ಅಧಿಕಾರ ಬೆನ್ನಟ್ಟುವ ಭೌತಿಕ ಯಾನ ನೆಮ್ಮದಿ ಕೊಡುವುದಿಲ್ಲ. ಸುಖ ಶಾಂತಿಗೆ ಲಲಿತ ಕಲೆಗಳ ಅವಶ್ಯವಿದೆ ಎಂದರು.
ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ ‘ಕಲಾ ದೇಗುಲವಾದ ಹಂಚಿನಮನ ಆರ್ಟ್ ಗ್ಯಾಲರಿ ಮುಂಬರುವ ದಿನಗಳಲ್ಲಿ ಹೊಸಬರಿಗೆ ದೊಡ್ಡ ವೇದಿಕೆಯಾಗಿ ಪ್ರೇರಣೆ ನೀಡಲಿದೆ’ ಎಂದರು.
ಕಲಾವಿದ ಕರಿಯಪ್ಪ ಹಂಚಿನಮನಿ,ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಬನವಾಸಿಯ ನಾಗಭೂಷಣ ಸ್ವಾಮೀಜಿ ಹಾಗೂ ಹಿರಿಯ ಲೇಖಕ ಸತೀಶ ಕುಲಕರ್ಣಿ ಇದ್ದರು.
ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾದ ಲಿಂಗಯ್ಯ ಹಿರೇಮಠ ಮತ್ತು ತಾಲ್ಲೂಕು ಅಧ್ಯಕ್ಷ ವೈ.ಬಿ. ಆಲದಕಟ್ಟಿ ಅವರನ್ನು ಕಲಾ ಬಳಗದಿಂದ ಸನ್ಮಾನಿಸಲಾಯಿತು.
ಸಂಜೀವಕುಮಾರ ನೀರಲಗಿ, ನಾಗೇಂದ್ರ ಕಟಕೋಳ, ವಿ.ಎನ್. ತಿಪ್ಪನಗೌಡ್ರ, ಪರಮೇಶ್ವರ ಮೇಗಳಮನಿ, ಪ್ರೊ.ಶೇಖರ ಭಜಂತ್ರಿ, ಪ್ರೊ.ಮುತ್ತುರಾಜ, ವಿರೂಪಾಕ್ಷ ಹಾವನೂರು, ದಯಾನಂದ ಯಡ್ರಾಮಿ, ಶಂಕರ ಬಿಸರಳ್ಳಿ, ಜಯದೇವ ಕೆರೋಡಿ ಇದ್ದರು.ಎಸ್. ಆರ್. ಹಿರೇಮಠ ಸ್ವಾಗತಿಸಿದರು. ಕಾರ್ಯಕ್ರಮವನ್ನು ನಾಗರಾಜ ನಡುವಿನಮಠ ನಡೆಸಿದರು. ಪೃಥಿರಾಜ ಬೆಟಗೇರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.