ADVERTISEMENT

ರಟ್ಟೀಹಳ್ಳಿ ಬಳಿ ಭೀಕರ ರಸ್ತೆ ಅಪಘಾತ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 16:31 IST
Last Updated 15 ಜನವರಿ 2022, 16:31 IST
ಅಪಘಾತ ನಡೆದ ಸ್ಥಳ
ಅಪಘಾತ ನಡೆದ ಸ್ಥಳ   

ರಟ್ಟೀಹಳ್ಳಿ: ತಾಲ್ಲೂಕಿನ ಕಡೂರ ಗ್ರಾಮದ ಬಳಿ ದಾಸನಹಳ್ಳದ ತಿರುವಿನಲ್ಲಿ ಶನಿವಾರ ಸಂಜೆ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದರೆ, ಇಬ್ಬರು ಮಕ್ಕಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಅಸುನೀಗಿದರು.

ಶಿಕಾರಿಪುರ ತಾಲ್ಲೂಕಿನ ಮಟ್ಟಿಕೋಟೆ ಗ್ರಾಮದ ಶಂಕರಗೌಡ ನಾಗಪ್ಪನವರ (40), ಶಾಂತಾ ಹೊಟ್ಟೀಗೌಡ್ರ (30), ರಘು ಹೊಟ್ಟಿಗೌಡ್ರ (12), ಪುನೀತ (12) ಮೃತಪಟ್ಟವರು.

6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕರೆದೊಯ್ಯಲಾಯಿತು.

ADVERTISEMENT

ಪವಿತ್ರಾ, ಪೂಜಾ, ಪ್ರೀತಮ್‌, ಕಲಾವತಿ, ಪೃಥ್ವಿ, ಪ್ರೇಮಾ ಗಾಯಗೊಂಡವರು.

ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿ ತುಮ್ಮಿನಕಟ್ಟಿ ಮಾರ್ಗವಾಗಿ ಅಣ್ಣ–ತಮ್ಮಂದಿರ ಎರಡು ಕಾರುಗಳು ಊರಿಗೆ ಮರಳುತ್ತಿದ್ದವು. ಈ ಸಂದರ್ಭ ಎದುರಿಗೆ ಮೆಕ್ಕೆಜೋಳ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಮುಂದೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ನಂತರ ಹಿಂದೆ ಇದ್ದ ಕಾರು ಕೂಡ ಬಂದು ಅಪ್ಪಳಿಸಿದೆ.

ಮಾಹಿತಿ ತಿಳಿಯುತ್ತಲೇ ರಟ್ಟೀಹಳ್ಳಿ ಠಾಣೆಯ ಪಿ.ಎಸ್.ಐ. ಕೃಷ್ಣಪ್ಪ ತೋಪಿನ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು, ತುರ್ತು ಕ್ರಮ ಕೈಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.