ADVERTISEMENT

ಕಾರ್ಮಿಕ ಅದಾಲತ್‌ನಿಂದ ಪರಿಹಾರ ಪಡೆಯಿರಿ: ನ್ಯಾಯಾಧೀಶರಾದ ಯಾದವ ವನಮಾಲಾ

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಯಾದವ ವನಮಾಲಾ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 15:23 IST
Last Updated 30 ಆಗಸ್ಟ್ 2021, 15:23 IST
ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಬಾಕಿ ಅರ್ಜಿಗಳ ವಿಲೇವಾರಿ ಮಾಡುವ ‘ಕಾರ್ಮಿಕ ಅದಾಲತ್’ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಯಾದವ ವನಮಾಲಾ ಚಾಲನೆ ನೀಡಿದರು 
ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಬಾಕಿ ಅರ್ಜಿಗಳ ವಿಲೇವಾರಿ ಮಾಡುವ ‘ಕಾರ್ಮಿಕ ಅದಾಲತ್’ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಯಾದವ ವನಮಾಲಾ ಚಾಲನೆ ನೀಡಿದರು    

ಹಾವೇರಿ: ಕಾರ್ಮಿಕರ ಕಾನೂನಾತ್ಮಕ ಸಮಸ್ಯೆಗಳನ್ನು ಕಾರ್ಮಿಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಲು ಆ.16ರಿಂದ ಸೆ.16ರವರೆಗೂ ಕಾರ್ಮಿಕರ ಅಹಲವಾಲುಗಳನ್ನು ಸ್ವೀಕರಿಸಲಾಗುವುದು. ಈ ಕಾರ್ಮಿಕ ಅದಾಲತ್‍ನ ಸದುಪಯೋಗ ಪಡಿಸಿಕೊಳ್ಳಲು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಯಾದವ ವನಮಾಲಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಬಾಕಿ ಅರ್ಜಿಗಳ ವಿಲೇವಾರಿ ಮಾಡುವ ಕಾರ್ಮಿಕ ಅದಾಲತ್ ಹಾಗೂ ಕಾರ್ಮಿಕ ಅದಾಲತ್ ಕಾರ್ಯಕ್ರಮದ ಆಟೊ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಮಿಕರು ತಮಗಿರುವ ಸೌಲಭ್ಯಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಳ್ಳಬೇಕು. ತಮಗೆ ಸೌಲಭ್ಯ ಪಡೆಯಲು ಸಮಸ್ಯೆಗಳು ಉಂಟಾದರೆ ಕಾರ್ಮಿಕ ಅದಾಲತ್‍ನಲ್ಲಿ ಸೂಕ್ತ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ADVERTISEMENT

ಎರಡು ವರ್ಷಗಳಿಂದ ಕೋವಿಡ್-19 ಸೋಂಕಿನಿಂದ ಉಂಟಾಗಿರುವ ತೊಂದರೆಗಳು ನಮಗೆಲ್ಲ ಬದುಕಿನ ಪಾಠ ಕಲಿಸಿವೆ. ಕಾರ್ಮಿಕ ಸಂಘಟನೆಯವರು, ಅಧಿಕಾರಿ ವರ್ಗ ಸೇರಿದಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನ್ಯಾಯೋಚಿತವಾಗಿ ನಿರ್ವಹಿಸಬೇಕು. ಮನುಕುಲದ ಒಳಿತಿಗಾಗಿ ಶ್ರಮಿಸಬೇಕು. ಜನಸ್ನೇಹಿ ವಾತಾವರಣ ನಿರ್ಮಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತೂರ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ವಿವಿಧ ಸೌಲಭ್ಯಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ನಿಯಮಾನುಸಾರ ಮತ್ತು ಕೋವಿಡ್-19 ಪರಿಹಾರ ಧನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಜಿಲ್ಲೆಯಾದ್ಯಂತ ಸೆ.16ರವರೆಗೆ ಕಾರ್ಮಿಕ ಅದಾಲತ್‌ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಕ ಅಧಿಕಾರಿ ಡಾ.ಬಸವರಾಜ, ಕಾರ್ಮಿಕ ನಿರೀಕ್ಷಕಿ ಲತಾ.ಟಿ.ಎಸ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.