
ಹಾನಗಲ್: ಮೊಬೈಲ್ ಮತ್ತು ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಕನ್ನಡದ ಬಳಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದ್ದು, ಕನ್ನಡ ನಮ್ಮ ಭಕ್ತಿ ಎಂಬ ಭಾವನೆ ಬೆಳೆಸಿಕೊಳ್ಳೋಣ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಶನಿವಾರ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕಾಡಳಿತ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಭಾಷೆಯೇ ನಮ್ಮ ಆತ್ಮ. ಕನ್ನಡ ಉಳಿದರಷ್ಟೇ ನಾವೂ ಉಳಿಯುತ್ತೇವೆ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಜಿಲ್ಲೆಯ ಹೋರಾಟಗಾರರ ಕೊಡುಗೆ ಮಹತ್ವದ್ದಾಗಿದೆ ಎಂದರು.
ತಹಶೀಲ್ದಾರ್ ರೇಣುಕಾ ಎಸ್. ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳಲ್ಲಿ ಬೇರೆ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದ ಕನ್ನಡ ನಾಡು ಏಕೀಕರಣ ಹೋರಾಟದ ಫಲದಿಂದ ಕರ್ನಾಟಕ ರಾಜ್ಯವಾಗಿ ಉದಯವಾಗಿದೆ. ಆಯಾ ಕಾಲಘಟ್ಟದಲ್ಲಿ ರಾಜ್ಯದ ಏಳಿಗೆಗೆ ಶ್ರಮಿಸಿದ ಎಲ್ಲ ಮಹನೀಯರು ಸ್ಮರಣೀಯರಾಗಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ಕನ್ನಡ ಪರ ಸಂಘಟನೆಯ ನಾಗರಾಜ ಮಣ್ಣಮ್ಮನವರ, ಹನುಮಂತಪ್ಪ ಕೊಣನಕೊಪ್ಪ, ಗಣ್ಯರಾದ ಖುರ್ಷಿದ್ ಹುಲ್ಲತ್ತಿ, ಮಮತಾ ಆರೆಗೊಪ್ಪ, ವಿಜಯಕುಮಾರ ದೊಡ್ಡಮನಿ, ಟಾಕನಗೌಡ ಪಾಟೀಲ, ಮಂಜು ಗೊರಣ್ಣನವರ, ಶಿವು ತಳವಾರ, ಮೇಕಾಜಿ ಕಲಾಲ, ಸುರೇಶ ನಾಗಣ್ಣನವರ, ವಿರುಪಾಕ್ಷಪ್ಪ ಕಡಬಗೇರಿ, ಶಂಶಿಯಾ ಬಾಳೂರ, ಷಣ್ಮುಖಪ್ಪ ಮುಚ್ಚಂಡಿ, ವಿನಾಯಕ ಬಂಕನಾಳ, ಮಾರ್ತಾಂಡಪ್ಪ ಮಣ್ಣಮ್ಮನವರ, ಉಮೇಶ ಮಾಳಗಿ, ಮಧು ಪಾಣಿಗಟ್ಟಿ, ಶಿವು ಭದ್ರಾವತಿ, ಸೋಮಶೇಖರ ಕೋತಂಬರಿ, ಪರಶುರಾಮ ಪೂಜಾರ, ಜಗದೀಶ ಇದ್ದರು.
ಶ್ವಾನ ತರಬೇತಿದಾರ ಬಮ್ಮನಹಳ್ಳಿಯ ರಂಜಿತ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಶ್ವಾನ ಮತ್ತು ಕುದುರೆ ಸಾಹಸ ಪ್ರದರ್ಶನ ಗಮನ ಸೆಳೆಯಿತು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ನಾಡು, ನುಡಿಯ ಇತಿಹಾಸ ಸಾರುವ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.