ಹಾವೇರಿ:ಪ್ರಧಾನಿ ನರೇಂದ್ರ ಮೋದಿ ಚೌಕಿದಾರನಲ್ಲ, ಷೋಕಿದಾರ ಎಂದು ಮಾಜಿ ಸಚಿವ ಎಚ್.ಆಂಜನೇಯ ವ್ಯಂಗ್ಯವಾಡಿದರು.
ಚೌಕಿದಾರನಾಗಿದ್ದರೆ, ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದಾಗ ಕ್ರಮ ಕೈಗೊಳ್ಳುತ್ತಿದ್ದರು ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೋದಿ ದಿನಕ್ಕೊಂದು ಲಕ್ಷಗಟ್ಟಲೆ ಮೌಲ್ಯದ ಬಟ್ಟೆ ಧರಿಸಿ, ಮೇಕಪ್ ಮಾಡಿಕೊಂಡು ಸುತ್ತಾಡುತ್ತಿದ್ದಾರೆ. ಎಲ್ಲಿಯೂ ಬೆವರುವುದಿಲ್ಲ, ಬಟ್ಟೆಗೆ ಸುಕ್ಕುಗಟ್ಟುವುದಿಲ್ಲ, ಪ್ರವಾಸ ಮತ್ತು ಊಟಕ್ಕೇ ಕೋಟಿಗಟ್ಟಲೆ ಸರ್ಕಾರಿ ಹಣ ವ್ಯಯ ಮಾಡಿದ್ದಾರೆ ಎಂದ ಅವರು, ಇದು ಸಿನಿಮಾ ಅಲ್ಲ, ರಾಜಕೀಯ ಎಂದು ತಿಳಿಹೇಳಬೇಕು ಎಂದು ಟಾಂಗ್ ನೀಡಿದರು.
ಐದು ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಕೆಲಸವಿಲ್ಲದ ನಿರುದ್ಯೋಗಿಗಳನ್ನು ಸೇರಿಸಿ ‘ಮೋದಿ, ಮೋದಿ, ಮೋದಿ’ ಎಂದು ಘೋಷಣೆ ಕೂಗಿಸುತ್ತಿದ್ದಾರೆ ಎಂದರು.
ಪ್ರತ್ಯೇಕ ಧರ್ಮ?:
‘ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ‘ಸ್ವತಂತ್ರ ಧರ್ಮ’ದ ಶಿಫಾರಸನ್ನು ಅಂದಿನ ನಮ್ಮ ಸರ್ಕಾರವು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದು, ಇದನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ. ಅದೇ ಸಂಪುಟದಲ್ಲಿ ವೀರಶೈವ ಲಿಂಗಾಯತರೂ ಇದ್ದರು. ಆದರೆ, 8 ಲಿಂಗಾಯತ ಸಂಸದರ ಪೈಕಿ ಒಬ್ಬರಿಗೂ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಏಕೆ ಕೊಡಲಿಲ್ಲ?’ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನಿಸಿದರು.
ಜಿ.ಎಂ. ಸಿದ್ದೇಶ್ವರರನ್ನು ಸಂಪುಟದಿಂದ ತೆಗೆದು ಹಾಕಿ, ಅನಂತಕುಮಾರ್ ಹೆಗಡೆಯನ್ನು ಸಚಿವರನ್ನಾಗಿ ಮಾಡಿದ್ದೇಕೆ? ಎಂದ ಅವರು,ಜೈನ ಮತ್ತಿತರ ಧರ್ಮಗಳಿಗೆ ಈ ಸ್ಥಾನಮಾನ ನೀಡಲಿಲ್ಲವೇ? ಇದು ಧರ್ಮ ಒಡೆಯುವ ಕಾರ್ಯವೇ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯು ಈಗನಕಲಿ ಮತದಾನಕ್ಕೂ ಗ್ಯಾಂಗ್ ರೆಡಿ ಮಾಡಿಟ್ಟಿದೆ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.